ಮಂಗಳೂರು: ಸಂಚಾರ ನಿಯಮದಲ್ಲಿ ಬದಲಾವಣೆ ತಂದ ನೂತನ ಕಮಿಷನರ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 06. ನಗರದ ನೂತನ ಕಮಿಷನರ್ ಕುಲದೀಪ್ ಜೈನ್ ಅವರು ಅಧಿಕಾರವಹಿಸಿಕೊಂಡ ಬೆನ್ನಲ್ಲೇ ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಮೊದಲ ಹಂತದಲ್ಲಿ ನಗರದ ಅತೀ ಹೆಚ್ಚು ವಾಹನ ದಟ್ಟಣೆ ಇರುವ ಹಂಪನಕಟ್ಟೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಿದ್ದಾರೆ.


ವಾಹನಗಳ ದಟ್ಟಣೆ ಕಡಿಮೆ ಮಾಡಲು ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹಂಪನಕಟ್ಟ ಜಂಕ್ಷನ್‌ನ ಮಧ್ಯದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಹಾಗೆಯೇ ಯಾವ ಸಂಚಾರ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಲಾಗಿದೆ ಎನ್ನುವುದನ್ನು ಇಲ್ಲಿ ಗಮನಿಸಿ.

ಯಾವೆಲ್ಲ ಮಾರ್ಗಗಳಲ್ಲಿ ಬದಲಾವಣೆ?

1. ಇನ್ನು ಮುಂದೆ ಕ್ಲಾಕ್ ಟವರ್ ಕಡೆಯಿಂದ ಫಳ್ನೀರ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಹಂಪನಕಟ್ಟ ಸರ್ಕಲ್‌ನಲ್ಲಿ ನೇರವಾಗಿ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ, ಹಾಗೆಯೇ ಜೋಸ್ ಅಲುಕಾಸ್ ಮುಂಭಾಗ ಯು ಟರ್ನ್‌ ಮಾಡಿಕೊಂಡು ಹೋಗಬೇಕಾಗುತ್ತದೆ. ಅಲ್ಲಿಂದ ವಾಪಸು ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ಫಳ್ನೀರ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.

2. ಫ‌ಳ್ನೀರ್ ರಸ್ತೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ ಕ್ಲಾಕ್ ಟವರ್ ಕಡೆಗೆ ಚಲಿಸಬೇಕಾಗುತ್ತದೆ. ಕ್ಲಾಕ್ ಟವರ್ ಜಂಕ್ಷನ್‌ನಲ್ಲಿ ಯೂ ಟರ್ನ್ ತೆಗೆದುಕೊಂಡು ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.

3. ನವಭಾರತ್ ಸರ್ಕಲ್‌ನಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಿ.ಎಂ.ರಾವ್ ರಸ್ತೆಯ ಮೂಲಕ ಹೋಗಬೇಕಾಗುತ್ತದೆ. ಗಣಪತಿ ಹೈಸ್ಕೂಲ್ ರಸ್ತೆ ಮೂಲಕ ಕೃಷ್ಣಭವನಕಟ್ಟೆ ಜಂಕ್ಷನ್ ತಲುಪಿ, ಅಲ್ಲಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದು. ಅದೇ ರೀತಿ ನವಭಾರತ್ ಸರ್ಕಲ್ ಕಡೆಯಿಂದ ಫಳ್ನೀರ್ ರಸ್ತೆ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಜಂಕ್ಷನ್‌ನಲ್ಲಿ ಎಡ ತಿರುವು ಪಡೆಯಬೇಕಾಗುತ್ತದೆ. ಮುಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕಾಸ್ ಎದುರು ಯೂ ಟರ್ನ್ ಪಡೆದು ಹಂಪನಕಟ್ಟ ಜಂಕ್ಷನ್‌ ಬಂದು ಎಡಕ್ಕೆ ತಿರುಗಬೇಕಾಗುತ್ತದೆ. ಆಗ ಫಳ್ನೀರ್ ಹಾಗೂ ನೇರವಾಗಿ ಕ್ಲಾಕ್‌ಟವ‌ರ್ ಕಡೆಗೆ ಸಂಚರಿಸಬಹುದು.

4. ಹಂಪನಕಟ್ಟ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (Zebra Cross)ಅನ್ನು ರಚಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಈ ಮಾರ್ಗವನ್ನು ಉಪಯೋಗಿಸುವುದು.

5. ಸಾರ್ವಜನಿಕರಿಗೆ ವಿಶೇಷ ಸೂಚನೆ ನೀಡಲಾಗಿದ್ದು, ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಹಾಗೂ ನಗರ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳಿಗೆ ಹತ್ತಲು ಪ್ರಯಾಣಿಕರಿಗೆ ಅನುವು ಮಾಡಿಕೊಡಲಾಗಿದೆ. ಕೃಷ್ಣಭವನಕಟ್ಟೆ ನಿಲ್ದಾಣದ ಬಳಿಕ ಜೋಸ್ ಅಲುಕಾಸ್ ಎದುರಿನ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸುಗಳನ್ನು ಹತ್ತಲು ಅನುವು ಮಾಡಿಕೊಡಲಾಗಿದೆ. ಆದ್ದರಿಂದ ಪ್ರಯಾಣಿಕರು ಈ ಬಸ್ಸು ನಿಲ್ದಾಣಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಬಸ್ ನಿಲ್ದಾಣಗಳನ್ನು ಬಳಸಬಾರದು ಎಂದು ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

error: Content is protected !!

Join the Group

Join WhatsApp Group