ಕರ್ನಾಟಕಕ್ಕೆ ನಿರಾಸೆ, ಫೈನಲ್‌ಗೆ ಸೌರಾಷ್ಟ್ರ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ದೇಶೀಯ ಕ್ರಿಕೆಟ್‌ನ ಮಹತ್ವದ ಟೂರ್ನಿಯ ರಣಜಿ ಟ್ರೋಫಿಯಲ್ಲಿ ಫೈನಲ್‌ಗೇರುವ ಕರ್ನಾಟಕದ ಆಸೆ ಭಗ್ನಗೊಂಡಿದೆ. ಸೌರಾಷ್ಟ್ರ ತಂಡದ ವಿರುದ್ಧ 4 ವಿಕೆಟ್‌ ಸೋಲು ಕಂಡ ಕರ್ನಾಟಕ ತಂಡ ಸೆಮಿಫೈನಲ್‌ ಹಂತದಲ್ಲಿಯೇ ಹೊರಬಿದ್ದಿದೆ.ಗೆಲುವಿಗೆ 115 ರನ್‌ಗಳ ಸಾಧಾರಣ ಸವಾಲು ಪಡೆದುಕೊಂಡಿದ್ದ ಸೌರಾಷ್ಟ್ರ ತಂಡ, ವಿ.ಕೌಶಿಕ್‌ (32ಕ್ಕೆ 3) ಹಾಗೂ ಕೆ. ಗೌತಮ್‌ (38ಕ್ಕೆ 3) ಮಾರಕ ದಾಳಿಯ ನಡುವೆಯೂ 6 ವಿಕೆಟ್‌ ನಷ್ಟಕ್ಕೆ 117 ರನ್ ಬಾರಿಸಿ ಫೈನಲ್‌ಗೆ ಲಗ್ಗೆ ಇಡಲು ಯಶಸ್ವಿಯಾಯಿತು. ಆ ಮೂಲಕ ಸೌರಾಷ್ಟ್ರ ತಂಡ 2019-20ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಫೈನಲ್‌ ಸಾಧನೆ ಮಾಡಿದಂತಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 120 ರನ್‌ ಹಿನ್ನಡೆ ಕಂಡಿದ್ದ ಕರ್ನಾಟಕ ತಂಡ, ಐದನೇ ದಿನವಾದಲ್ಲಿ 4 ವಿಕೆಟ್‌ಗೆ 123 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿತು. ನಿಕಿನ್‌ ಜೋಸ್‌ (109 ರನ್‌, 161 ಎಸೆತ, 9 ಬೌಂಡರಿ) ಶತಕದ ಸಾಹಸದಿಂದ 234 ರನ್‌ಗೆ ಕರ್ನಾಟಕ ಆಲೌಟ್‌ ಆಯಿತು. ಇದರಿಂದಾಗಿ ಗೆಲುವಿಗೆ 115 ರನ್‌ಗಳ ಸವಾಲು ಪಡೆದಿದ್ದ ಸೌರಾಷ್ಟ್ರ ತಂಡ, ರಾಜ್ಯ ತಂಡದ ಬೌಲರ್‌ಗಳ ಹೋರಾಟದ ನಡುವೆಯೂ ಫೈನಲ್‌ಗೇರುವಲ್ಲಿ ಯಶಸ್ಸು ಕಂಡಿತು. ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು 306 ರನ್‌ಗಳಿಂದ ಮಣಿಸಿದ ಬಂಗಾಳ ತಂಡ ಫೈನಲ್‌ಗೆ ಪ್ರವೇಶ ಪಡೆದಿದೆ ಎಂದು ವರದಿ ತಿಳಿಸಿದೆ.

 

error: Content is protected !!
Scroll to Top