ಕೋರಿಯಾರ್: ಕುಮಾರಧಾರಾ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಡಿ.18. ಮನೆಕೆಲಸಕ್ಕಾಗಿ ಮರಳು ತೆಗೆಯಲೆಂದು ಮನೆಯವರೊಂದಿಗೆ ನದಿಗೆ ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕೇನ್ಯ ಗ್ರಾಮದ ಕೋರಿಯಾರ್ ಕುಮಾರಧಾರಾ ನದಿಯಲ್ಲಿ ಭಾನುವಾರದಂದು ನಡೆದಿದೆ.

ಮೃತ ಬಾಲಕನನ್ನು ಸುಳ್ಯ ತಾಲೂಕಿನ ಐವತ್ತೊಕ್ಳು ಗ್ರಾಮದ ಕಂಡೂರು ನಿವಾಸಿ ನಾರಾಯಣ ಗೌಡ ಎಂಬವರ ಪುತ್ರ ಮನೋಜ್(14) ಎಂದು ಗುರುತಿಸಲಾಗಿದೆ. ಮನೋಜ್ ತನ್ನ ಚಿಕ್ಕಪ್ಪನಿಗೆ ಆಶ್ರಯ ಯೋಜನೆಯಲ್ಲಿ ಮಂಜೂರಾದ ಮನೆಯ ಕಾಮಗಾರಿಗಾಗಿ ಮರಳನ್ನು ತರಲು ಪೋಷಕರೊಂದಿಗೆ ಕುಮಾರಧಾರ ನದಿಗೆ ತೆರಳಿದ್ದು, ಮಧ್ಯಾಹ್ನ ಊಟದ ಸಮಯದಲ್ಲಿ ಕೈತೊಳೆಯಲೆಂದು ನದಿಗೆ ಇಳಿದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಪೋಷಕರು ನೀರಿಗಿಳಿಯುವಷ್ಟರಲ್ಲಿ ಮನೋಜ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group