ರಾಮಕುಂಜ: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ| ಹರೀಶ್ ಹಂದೆ ಭೇಟಿ ► ರಾಮಕುಂಜೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಡಿ.18. ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಸೆಲ್ಕೋ ಇಂಡಿಯಾದ ಸಂಸ್ಥಾಪಕ ಡಾ.ಹರೀಶ್ ಹಂದೆ ಶುಕ್ರವಾರದಂದು ರಾಮಕುಂಜ ವಿದ್ಯಾಸಂಸ್ಥೆಗೆ ಭೇಟಿ ನೀಡಿದ್ದು ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು. ಸಂಸ್ಥೆಯಲ್ಲಿ ಆಯೋಜಿಸಿದ್ದ ಗಣಿತ ಮಾದರಿಗಳ ಪ್ರದರ್ಶನವನ್ನು ಡಾ.ಹರೀಶ್ ಹಂದೆಯವರು ಈ ವೇಳೆ ಉದ್ಘಾಟಿಸಿದರು.

ಭಾರತ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ವಿಶ್ವ ಅಭಿವೃದ್ಧಿಗೊಳ್ಳಲಿದೆ ಎಂಬುದು ದೆಹಲಿಯಲ್ಲಿ ಎರಡು ವರ್ಷ ವ್ಯಾಸಾಂಗ ಮಾಡಿದ ಅಮೆರಿಕನ್ ಪ್ರಜೆಯೊಬ್ಬರ ಅಭಿಪ್ರಾಯವಾಗಿದೆ. ಆತನಲ್ಲಿ ಭಾರತದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೊಳ್ಳದೇ ಇದ್ದಲ್ಲಿ ವಿಶ್ವ ಅಭಿವೃದ್ಧಿಗೊಳ್ಳಲು ಸಾಧ್ಯವಿಲ್ಲ ಎಂಬ ಕಲ್ಪನೆ ಇತ್ತು. ಇದಕ್ಕಾಗಿಯೇ ಆತ ಹಿಂದಿಯಲ್ಲಿ ಭಾರತದ ಮೊದಲ 5 ಸಮಸ್ಯೆಗಳ ಬಗ್ಗೆ ಪ್ರಬಂಧ ಬರೆದಿದ್ದಾನೆ. ಯಾವ ತರ ನೀರನ್ನು ಶುದ್ದಗೊಳಿಸಬಹುದು ಎಂಬ ಬಗ್ಗೆಯೂ ಪರಿಹಾರ ಮಂಡಿಸಿದ್ದಾನೆ. ವಿದ್ಯಾರ್ಥಿಗಳಲ್ಲೂ ಈ ಭಾವನೆ ಬರಬೇಕು. ಜಗತ್ತಿಗೆ ಭಾರತ ಸೊಲ್ಯುಷನ್ ಸೆಂಟರ್ ಆಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕೆಂದು ಡಾ. ಹಂದೆ ಹೇಳಿದರು.

ಜೀವನದಲ್ಲಿ ಆಗುವ ಸೋಲಿನ ಬಗ್ಗೆ ಎಂದಿಗೂ ನಿರಾಸೆ ಪಡಬೇಕಾಗಿಲ್ಲ. ಆದರಿಂದ ನಾವು ಬಹಳಷ್ಟು ಕಲಿಯಲು ಸಾಧ್ಯವಿದೆ. ಎಲ್ಲರಲ್ಲೂ ಒಂದೊಂದು ಶಕ್ತಿ ಇದೆ. ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಫೈಲ್ ಆಗಿದ್ದೇವೆ ಎಂಬುದರ ಬಗ್ಗೆ ಕೊರಗು ಬೇಡ. ಇದರಿಂದ ನಾವು ಕಲಿಯುವುದು ಬಹಳಷ್ಟು ಇದೆ ಎಂದು ಹೇಳಿದ ಡಾ.ಹರೀಶ್ ಹಂದೆ, ತರಗತಿಯಲ್ಲಿ ಫಸ್ಟ್‌, ಸೆಕೆಂಡ್ ಬರುವ ವಿದ್ಯಾರ್ಥಿಗೆ ಬೋಧನೆ ಮಾಡುವುದು ಸುಲಭ. ಕಲಿಕೆಯಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಯನ್ನು ತರಗತಿಯಲ್ಲಿ ಫಸ್ಟ್‌ ಬರುವಂತೆ ಮಾಡುವುದೇ ಅಧ್ಯಾಪಕರ ಶಕ್ತಿ ಎಂದು ಹೇಳಿದರು. ದಿನನಿತ್ಯ ನಮಗೆ ಅನೇಕ ಸಮಸ್ಯೆಗಳು ಕಾಣಸಿಗುತ್ತವೆ. ಇದರ ಬಗ್ಗೆ ದೂರುವುದು ಸುಲಭ. ಆದರೆ ಅದಕ್ಕೆ ಪರಿಹಾರ ಹುಡುಕುವುದು ಕಷ್ಟ. ಗ್ರಾಮೀಣ ಪ್ರದೇಶದ ಬಡ ಜನರಿಗೆ ಭವಿಷ್ಯದಲ್ಲಿ ಪ್ರಯೋಜನವಾಗುವಂತಹ ಪರಿಹಾರ(ಸೊಲ್ಯುಷನ್)ಗಳನ್ನು ವಿದ್ಯಾರ್ಥಿಗಳು ಪ್ರತಿ ವರ್ಷವೂ ಮಂಡಿಸಬೇಕು. ಈ ಪೈಕಿ ಅತ್ಯುತ್ತಮವಾದ ಮೂರು ಸೊಲ್ಯುಷನ್ಗಳಿಗೆ ಸೆಲ್ಕೋ ವತಿಯಿಂದ ಬಹುಮಾನ ನೀಡಲಾಗುವುದು. ಈ ನಿಟ್ಟಿನಲ್ಲಿ ‘ಸಂಶೋಧನೆ ವಿದ್ಯಾರ್ಥಿ ವೇತನ’ ನೀಡುವುದಾಗಿಯೂ ಡಾ.ಹರೀಶ್ ಹಂದೆ ಹೇಳಿದರು.

1991ರಲ್ಲಿ ಸೌತ್ ಅಮೆರಿಕಾದ ಡೊಮೆನಿಕ್ ರಿಪಬ್ಲಿಕ್ ರಾಜ್ಯದಲ್ಲಿನ ಬಡ ರೈತರೋರ್ವರ ಮನೆಗೆ ಭೇಟಿ ನೀಡಿದ ವೇಳೆ ಅವರು ಸೌರಶಕ್ತಿ ಬಳಸಿ ಬಲ್ಬ್‌ ಉರಿಸುತ್ತಿದ್ದುದ್ದೇ ಸೆಲ್ಕೋ ಸೋಲಾರ್ ಇಂಡಿಯಾ ಸ್ಥಾಪನೆಗೆ ಕಾರಣವಾಯಿತೆಂದು ಡಾ.ಹರೀಶ್ ಹಂದೆಯವರು ವಿದ್ಯಾರ್ಥಿಯೋರ್ವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು. ವಾಹನಗಳನ್ನೂ ಸೋಲಾರ್ ಬೆಳಕಿನಲ್ಲಿ ಓಡಿಸಬಹುದು. ಇದಕ್ಕಾಗಿ ಪೆಟ್ರೋಪ್ ಪಂಪ್ಗಳ ಮಾದರಿಯಲ್ಲಿಯೇ ಸೋಲಾರ್ ಚಾರ್ಜಿಂಗ್ ಕೇಂದ್ರಗಳೂ ಅಲ್ಲಲ್ಲಿ ಆರಂಭಗೊಳ್ಳಬೇಕೆಂದು ಹಂದೆ ಹೇಳಿದರು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಹಾಗೂ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಸುಮಾರು 1200 ವಿದ್ಯಾರ್ಥಿಗಳು ಶೈಕ್ಷಣಿಕ ಸಂವಾದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಚೈತ್ರಾ, ನಂದಿತಾ ಎಸ್.ಭಟ್, ರಶ್ಮಿತಾ, ಶಂಕರ ಭಾರದ್ವಾಜ್, ಪುರ್ಣಾನಂದ, ದಿನೇಶ್, ಕಾಂತಿಭಟ್, ಜ್ಯೋತಿಭಟ್, ಶ್ರೀನಿಧಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಡಾ.ಹರೀಶ್ ಹಂದೆಯವರಿಗೆ ಪ್ರಶ್ನೆಗಳನ್ನು ಮುಂದಿಟ್ಟರು.

ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆಯವರು ಅನುಭವ ಹಂಚಿಕೊಂಡರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.,ಸ್ವಾಗತಿಸಿ, ಶ್ರೀ ರಾಮಕುಂಜೇಶ್ವರ ಪ.ಪು.ಕಾಲೇಜಿನ ಪ್ರಾಂಶುಪಾಲ ಸತೀಶ್ ಭಟ್ ವಂದಿಸಿದರು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾ ಪ್ರಾರ್ಥಿಸಿದರು. ಶ್ರೀ ರಾಮಕುಂಜೇಶ್ವರ ಪ.ಪು.ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಹಾಗೂ ನಿರಂಜನ್ರವರು ತಯಾರಿಸಿದ ಸೋಲಾರ್ ಮೂಲಕ ಮಾಡಬಹುದಾದ ಹುಲ್ಲು ಕತ್ತರಿಸುವ ಯಂತ್ರದ ಮಾದರಿಯನ್ನು ಈ ವೇಳೆ ಡಾ.ಹರೀಶ್ ಹಂದೆ ಲೋಕಾರ್ಪಣೆ ಮಾಡಿದರು.

error: Content is protected !!

Join the Group

Join WhatsApp Group