ವಿಜೃಂಭಣೆಯಿಂದ ನಡೆದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ► ಕನ್ನಡದ ಕಂಪನ್ನು ಬೀರಿದ ಕದಂಬರ ನಾಡು

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಕನ್ನಡವನ್ನು ಧರಿಸಬೇಕು ಮತ್ತು ಆಧರಿಸಬೇಕು. ಸಾಹಿತ್ಯ ಸಮ್ಮೇಳನ ವೈಭವಕ್ಕೆ ಸೀಮಿತವಾಗದೆ ಸಾಹಿತ್ಯ ಉಳಿಸುವುದಕ್ಕೆ ಪ್ರೇರಣೆಯಾಗಬೇಕು. ಎಂದು ನಿವೃತ್ತ ಶಿಕ್ಷಕ ಪಾದೆಕಲ್ಲು ವಿಷ್ಣು ಭಟ್ ಹೇಳಿದರು. ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಕಡಬದ ಸರಕಾರಿ ಪದವಿ ಪುರ್ವ ಕಾಲೇಜಿನ ಆವರಣದಲ್ಲಿ ಬಿ.ಟಿ.ಆರಿಗ ಜೈನಿ ಸಭಾಂಗಣದಲ್ಲಿ ಕುಲ್ಕುಂದ ಶಿವರಾಮ ವೇದಿಕೆಯಲ್ಲಿ ಶನಿವಾರದಂದು ನಡೆದ ಅವಿಭಜಿತ ಪುತ್ತೂರು ತಾಲೂಕಿನ 17 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಾಡಿನ ನೆಲ ಜಲವನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು, ಹಿರಿಯರು ಮಾರ್ಗದರ್ಶನ ನೀಡಿದಾಗ ಸಹಜವಾಗಿಯೇ ಕನ್ನಡದ ಮೇಲೆ ಒಳವು ಮೂಡುತ್ತದೆ. ಕನ್ನಡ ನಾಡಿನಲ್ಲಿ ಬಹುಭಾಷ ಮೇಳವಿದ್ದು, ಇದರಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ನಿಂತಿದೆ. ಹಾಗಾಗಿ ಯುವ ಜನತೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಾಹಿತ್ಯ ಉಳಿಯುತ್ತದೆ ಎಂದರು.

ಶನಿವಾರದಂದು ಬೆಳಿಗ್ಗೆ ಕಡಬ ಸೈಂಟ್ ಜೋಕಿಮ್ಸ್‌ ಶಾಲಾ ಆವರಣದಲ್ಲಿ ಕನ್ನಡ ಭುವನೇಶ್ವರಿಯ ದಿಬ್ಬಣದ ಮೆರವಣಿಗೆಯನ್ನು ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಕಡಬದ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ನೂಜಿಬಾಳ್ತಿಲ ಸಂಯುಕ್ತ ಪದವಿಪುರ್ವ ಕಾಲೇಜು, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಸೈಂಟ್ ಜೋಕಿಮ್ಸ್‌ ವಿದ್ಯಾ ಸಂಸ್ಥೆ, ಸೈಂಟ್ ಆನ್ಸ್‌ ಆಂಗ್ಲ ಮಾಧ್ಯಮ ಶಾಲೆ, ಸರಸ್ವತಿ ವಿದ್ಯಾಲಯ, ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಡಬ ಸರಕಾರಿ ಪ್ರೌಢಶಾಲೆ ಮತ್ತು  ಪದವಿ ಪುರ್ವ ಕಾಲೇಜು, ಓಂತ್ರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಡ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರ್ದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂರಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪನ್ಯ ಗುರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತ ಭುವನೇಶ್ವರಿ ದೇವಿಯ ವೇಷ ಧರಿಸಿದ್ದರು. ಬಳಿಕ ಕಡಬ ಸರಕಾರಿ ಪದವಿ ಪುರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್ ರಾಷ್ಟ್ರ ಧ್ವಜಾರೋಹಣ, ನಿವೃತ್ತ ಉಪನ್ಯಾಸಕ ಬಿ.ವಿ. ಅರ್ತಿಕಜೆ ಪರಿಷತ್ತು ಧ್ವಜಾರೋಹಣ ಹಾಗೂ ಶಾಸಕ ಎಸ್.ಅಂಗಾರ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಕಣಕಾರ ನಾ| ಕಾರಂತ ಪೆರಾಜೆ, ಕನ್ನಡ ಭಾಷೆಯನ್ನು ಪ್ರೀತಿಸುವ, ಅಕ್ಷರವನ್ನು ಗೌರವಿಸುವ ಮನಸ್ಸುಗಳು ಅಧಿಕವಾಗಬೇಕು. ಭಾಷೆ ಬದುಕಾಗಿ, ನಿತ್ಯ ಉಸಿರಾಗಿ ಬದುಕಿನೊಂದಿಗೆ ಮಿಳಿತವಾದಾಗ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂದರು. ಸಾಹಿತಿಗಳು ಮತ್ತು ಸಾಹಿತ್ಯ ಸಮಾಜದ ಎರಡು ಕಣ್ಣುಗಳಾಗಿದ್ದು, ಸಾಹಿತಿಯು ಸಮಾಜವನ್ನು ಕಟ್ಟುವ ಶಕ್ತಿಯನ್ನು ಹೊಂದಿದ್ದಾನೆ. ಪೋಷಕರ ಅನ್ಯ ಭಾಷೆಗಳ ಬಗೆಗಿನ ವ್ಯಾಮೋಹದಿಂದಾಗಿ ಮಕ್ಕಳ ಭವಿಷ್ಯ ರೂಪಿಸಬೇಕಾದವರೇ ಭವಿಷ್ಯಕ್ಕೆ ಮಾರಕವಾಗುತ್ತಾರೋ ಎಂಬ ಭಯ ಕಾಡುತ್ತಿದೆ. ಕನ್ನಡ ನೆಲದಲ್ಲಿ ಕನ್ನಡವನ್ನು ಉಳಿಸಿ ಎಂದು ಹೇಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಳ್ಯ ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಭಾಷೆ ಯಾವುದಾದರೂ ಭಾವನೆಗಳು ಒಂದೇ ಆಗಿರಬೇಕು. ನಮ್ಮ ಹಿರಿಯರು ಜಾತಿ, ಭಾಷೆ ಬೇಧ ಮರೆತು ಆಂಗ್ಲರ ವಿರುದ್ದ ಹೋರಾಡಿದ ಪರಿಣಾಮವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಈ ಹಿನ್ನೆಲೆಯಂತೆ ನಾಡು ನುಡಿಯ ಬಗ್ಗೆ ಅಪಚಾರವಾದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು. ಸೈಂಟ್ ಜೋಕಿಮ್ಸ್‌ ವಿದ್ಯಾ ಸಂಸ್ಥೆಯ ಸಂಚಾಲಕ ರೆ|ಫಾ| ರೊನಾಲ್ಡ್‌ ಲೋಬೋ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಕಡಬ ಸರಕಾರಿ ಪದವಿಪುರ್ವ ಕಾಲೇಜಿನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಕಲಾಪ್ರದರ್ಶನ ಉದ್ಘಾಟಿಸಿದರು. ತಾಲೂಕು ಸಾಹಿತ್ಯ ಸಮ್ಮೇಳನದ ನಿಕಟಪುರ್ವಾಧ್ಯಕ್ಷ ಪ್ರೊ| ಹರಿನಾರಾಯಣ ಮಾಡಾವು, ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ಕಡಬ ವಿಶೇಷ ತಹಶೀಲ್ದಾರ್ ಜಾನ್ ಪ್ರಕಾಶ್, ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ಮೊದಲಾದವರು ಅತಿಥಿಗಳಾಗಿದ್ದರು. ಸಮ್ಮೆಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಜನಾರ್ದನ ಗೌಡ ಪಿ, ಅಧ್ಯಕ್ಷ ಮಹಮ್ಮದ್ ಕುಂಞ ಮೊದಲಾದವರು ಇದ್ದರು.  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಯಣ ಭಟ್ ಉದ್ಘಾಟಕರ ಪರಿಚಯವಿತ್ತರು. ಡಾ. ಶ್ರೀಧರ ಎಚ್ ಜಿ ಸಮ್ಮೇಳನಾಧ್ಯಕ್ಷರ ಪರಿಚಯವಿತ್ತರು. ಉಪನ್ಯಾಸಕ ವಿಶ್ವನಾಥ ಪೆರ್ಲ ವಂದಿಸಿದರು.  ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ನಿರೂಪಿಸಿದರು. ಬಳಿಕ ನೂಜಿಬಾಳ್ತಿಲ ಬೆಥನಿ ಪದವಿಪುರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗಮನ ಸೆಳೆದ ಪ್ರದರ್ಶನಗಳು: ಕಾಲೇಜಿನ ವಿವಿಧ ಕೊಠಡಿಗಳಲ್ಲಿ ವಸ್ತು , ಪುಸ್ತಕ , ಕರಕುಶಲ ಪ್ರದರ್ಶನಗಳು ನಡೆಯಿತು. ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ ಗೌಡ ಅವರು ಸಂಗ್ರಹಿಸಿಕೊಂಡಿರುವ  ಗ್ರಾಮೀಣ ಜನತೆ ಈ ಹಿಂದೆ ಬಳಸುತ್ತಿದ್ದ ವಸ್ತುಗಳ ಪ್ರದರ್ಶನ, ಮರ್ದಾಳ ಕೃಷ್ಣ ನಗರ ಭಾರ್ಗವಿ ಕಸೂತಿ ಮತ್ತು ಕರಕುಶಲ ಕಲಾ ಕೇಂದ್ರ ಬೈಪಾಡಿಬೀಡು, ಋತುಪರ್ಣಾ ಕರಕುಶಲ ಕೇಂದ್ರ ಹೊಸಮಠ ಅವರುಗಳ ಕರಕುಶಲ ವಸ್ತುಗಳ ಪ್ರದರ್ಶನ, ಸೈಂಟ್ ಜೋಕಿಮ್ಸ್‌ ಪ್ರಾಥಮಿಕ ಶಾಲಾ ಶಿಕ್ಷಕ ಜಾನ್ ವೇಗಸ್ ಅವರ ನಾಣ್ಯ ಸಂಗ್ರಹ, ಪುಸ್ತಕ ಪ್ರದರ್ಶನ ಮಾರಾಟ ಮೊದಲಾದವುಗಳು ಕನ್ನಡಾಭಿಮಾನಿಗಳನ್ನು ಆಕರ್ಷಿಸುತ್ತಿತ್ತು.

ವಿಶೇಷ ಉಪನ್ಯಾಸ: ಸಮ್ಮೇಳನದ ಬಳಿಕ ನಡೆದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಪರ್ತಕರ್ತ ನಾಗರಾಜ್ ಎನ್.ಕೆ ಕಡಬ ಪರಿಸರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಧರ್ನಪ್ಪ ಮೂಲ್ಯ ಉಪಸ್ಥಿತರಿದ್ದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊೖಲ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ ವಂದಿಸಿದರು. ಶಿಕ್ಷಕ ಮಾಯಿಲಪ್ಪ ಜಿ ನಿರೂಪಿಸಿದರು.

ಕವಿಗೋಷ್ಟಿ: ಸಾಹಿತ್ಯ ಸಮ್ಮೇಳನ ಪ್ರಯುಕ್ತ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿತಾ ಅಡೂರು ವಹಿಸಿದ್ದರು. ಕವಿತಾ ಅಡೂರು, ನಾರಾಯಣ ರೈ ಕುಕ್ಕುವಳ್ಳಿ, ಪಿ.ಎಸ್.ನಾರಾಯಣ ಕೊೖಲ, ವಿವಿಧ ಶಾಲಾ ಕಾಲೇಜಿನ ಹನ್ನೊಂದು ವಿದ್ಯಾರ್ಥಿಗಳು ತಮ್ಮ ಸ್ವರಚಿತ ಕವಿತೆ ವಾಚಿಸಿದರು. ಉಪನ್ಯಾಸಕಿ ಲಾವಣ್ಯ ಕೆ.ಎಲ್. ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ವಂದಿಸಿದರು. ಭವ್ಯ ಪಿ.ಆರ್. ನಿಡ್ಪಳ್ಳಿ ನಿರೂಪಿಸಿದರು. ಕಡಬ ಸರಕಾರಿ ಪದವಿಪುರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಪನ್ಯಾಸ ಮತ್ತು ಹೊಸ ಪುಸ್ತಕಗಳ ಬಿಡುಗಡೆ: ವಿಶೇಷ ಉಪನ್ಯಾಸ ಮತ್ತು ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಶತಮಾನದ ನೆನಪು ವಾಣಿಯವರ ಬದುಕು ಮತ್ತು ಬರಹ ವಿಷಯದಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್ ಉಪನ್ಯಾಸ ನೀಡಿದರು.  ಸಮ್ಮೇಳನಾಧ್ಯಕ್ಷ ನಾ.ಕಾರಂತ ಪೆರಾಜೆ ಅವರು  ವಿವಿಧ ಸಾಹಿತಿಗಳ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಪ್ರಾಧ್ಯಾಪಕ ಡಾ|.ಕೆ.ಎಂ.ಮ್ಯಾಥ್ಯೂ ಹಾಗೂ ಕಡಬದ ಹಿರಿಯ ವೈದ್ಯ ಡಾ| ಸಿ.ಕೆ.ಶಾಸ್ತ್ರಿ ಅತಿಥಿಗಳಾಗಿದ್ದರು. ದುರ್ಗಾ ಸರಿತ ಸ್ವಾಗತಿಸಿದರು. ಜೆ ಪಿ ಎಂ ಚೆರಿಯಾನ್ ವಂದಿಸಿದರು. ಟಿ ಜೆ ಜೋಸೆಫ್ ನಿರೂಪಿಸಿದರು. ಕಡಬ ಸೈಂಟ್ ಜೋಕಿಮ್ಸ್‌ ಪದವಿಪುರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!

Join the Group

Join WhatsApp Group