ನಕಲಿ ಸಹಿ ಮಾಡಿ ಸಂಬಳ ಪಡೆದಿರುವ ಆರೋಪ ► ನೆಟ್ಟಣ KFDC ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಬ್ರಹ್ಮಣ್ಯ ವಿಭಾಗದ ನೆಟ್ಟಣದಲ್ಲಿ ನಿಗಮದ ಸಿಬಂದಿಯೊಬ್ಬರು ನಕಲಿ ಸಹಿ ಮಾಡಿ ಇನ್ನೊಬ್ಬರ ಸಂಬಳ ಪಡೆದಿದ್ದು, ಅವರ ವಿರುದ್ಧ ತಕ್ಷಣ ಕ್ರಮ ಜರಗಿಸಬೇಕು ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್‌ ಯೂನಿಯನ್ನ ಸುಬ್ರಹ್ಮಣ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅಗ್ರಹಿಸಿದರು.

ಅವರು ಶುಕ್ರವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮರುನಾಟಿ ರಬ್ಬರ್ ತೋಟದಲ್ಲಿ ನಕಲಿ ಹಾಜರಿ ಹಾಕಿ ಸಂಬಳ ಸ್ವೀಕರಿಸಲಾಗಿದೆ ಎಂದು ಆರೋಪಿಸಿದರು. 2015-16 ನೇ ಸಾಲಿನಲ್ಲಿ ಆರ್ ಆರ್ ಪಿ ನೆಟ್ಟಣ ಎಂಬಲ್ಲಿ ನಿಗಮದ ಸಿಬಂದಿ ಬಾಬು ಎಂಬವರು ನಕಲಿ ಹಾಜರಿ ಹಾಕಿ ಸಂಬಳ ಸ್ವೀಕರಿಸಿ ನಿಗಮಕ್ಕೆ ನಷ್ಟ ಉಂಟು ಮಾಡಿದ್ದಾರೆ. ಭಾಸ್ಕರ ಎಂಬ ಹಂಗಾಮಿ ನೌಕರನ ಹೆಸರಿನಲ್ಲಿ ನಕಲಿ ಹಾಜರಿ ಹಾಕಿ ಸಂಬಳ ಸ್ವೀಕರಿಸಿರುವುದು ಈಗಾಗಲೇ ಸಾಬೀತಾಗಿದೆ. ಈ ಬಗ್ಗೆ ನಿಗಮದ ವಿಭಾಗೀಯ ವ್ಯವಸ್ಥಾಪಕರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವ ವೇಳೆ ನಕಲಿ ಸಹಿ ಮಾಡಿರುವ ಬಗ್ಗೆ ಹಂಗಾಮಿ ಕಾವಲುಗಾರರಾದ ಮಹೇಶ, ಪ್ರಕಾಶ, ಶೀನಪ್ಪ ಎಂಬವರು ಸಾಕ್ಷಿ ನುಡಿದು ನಕಲಿ ದಾಖಲೆ ಸೃಷ್ಟಿರುವುದನ್ನು ಪುಷ್ಟೀಕರಿಸಿದ್ದಾರೆ.

ತನಿಖೆಯಲ್ಲಿ ಆರೋಪ ಸಾಬೀತಾಗಿದ್ದರೂ ಬಾಬು ಅವರ ವಿರುದ್ಧ ಈ ವರೆಗೆ ಯಾವುದೇ ಕ್ರಮ ಜರಗಿಸಿಲ್ಲ. ಇಂತಹ ಅವ್ಯವಹಾರ ನಿಗಮದ ಪ್ರತೀ ಯುನಿಟ್ ನಲ್ಲಿ ನಡೆಯುತ್ತಿದೆ. ನಿಗಮದಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆಯುತ್ತಿದ್ದರೂ ಯಾರೂ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಬಾಬು ಅವರ ಪ್ರಕರಣದಲ್ಲಿ ಶಿಕ್ಷೆ ವಿಧಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಈ ಹಿನ್ನೆಯಲ್ಲಿ ತಕ್ಷಣ ಆರೋಪಿಯ ವಿರುದ್ಧ ಕ್ರಮ ಜರಗಿಸಬೇಕು ತಪ್ಪಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸೆಲ್ವಕುಮಾರ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ನ ಪ್ರಮುಖರಾದ ರಾಜಾಕೃಷ್ಣ, ಸತ್ಯಶೀಲನ್, ರಾಮಲಿಂಗಂ, ಈಶ್ವರನ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group