ಜ.07 ರಂದು ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾಶಾಲೆ ಮತ್ತು ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ➤ ಜ.03 ರಿಂದ ದ.ಕ ಜಿಲ್ಲೆಯ ವಿವಿಧೆಡೆ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 24. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2023-24ನೇ ಸಾಲಿಗೆ ರಾಜ್ಯ, ಜಿಲ್ಲಾ ಕ್ರೀಡಾ ಶಾಲೆ ಹಾಗೂ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆ:
2023ನೇ ಜನವರಿ 3 ರಂದು ಬೆಳಿಗ್ಗೆ 10 ಗಂಟೆಗೆ ಸುಳ್ಯ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು, ಜನವರಿ 4ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ತಾಲೂಕಿನ ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣ, ಜನವರಿ 5ರಂದು ಬೆಳಿಗ್ಗೆ 10 ಗಂಟೆಗೆ ವಿಟ್ಲ ತಾಲೂಕಿನ ವಿಠಲ ಪ್ರೌಢಶಾಲೆ, ಜನವರಿ 6 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ಸರ್ಕಾರಿ ಪ್ರೌಢಶಾಲೆ, ಜನವರಿ 7ರಂದು ಬೆಳಿಗ್ಗೆ 10 ಗಂಟೆಗೆ ಕಡಬ ತಾಲೂಕಿನ ನೂಜಿಬಾಳ್ತಿದ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಜನವರಿ 9ರಂದು ಬೆಳಿಗ್ಗೆ 10 ಗಂಟೆಗೆ ಮೂಡಬಿದಿರೆ ತಾಲೂಕಿನ ತಾಲೂಕು ಕ್ರೀಡಾಂಗಣ (ಸ್ವರಾಜ್ ಮೈದಾನ), ಜನವರಿ 10 ರಂದು ಬೆಳಿಗ್ಗೆ 10ಗಂಟೆಗೆ ಮಂಗಳೂರು ತಾಲೂಕಿನ ಕೊಣಾಜೆ ವಿಶ್ವವಿದ್ಯಾಲಯ ಮೈದಾನ ಹಾಗೂ ಜನವರಿ 11 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ತಾಲೂಕಿನ ಮಂಗಳಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಕಿರಿಯರ ವಿಭಾಗ:
ಜಿಲ್ಲೆಯ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2023-24ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ 2023ನೇ ಜೂನ್ 1ರಂದು 11 ವರ್ಷದೊಳಗಿನವರಾಗಬೇಕು. ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2023-24ನೇ ಸಾಲಿಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ 2023ನೇ ಜೂನ್ 1ರಂದು 14 ವರ್ಷದೊಳಗಿನವರಾಗಬೇಕು. ತಾಲೂಕು ಮಟ್ಟದಲ್ಲಿ ಅರ್ಹತೆ ಪಡೆದು ರಾಜ್ಯ ಮಟ್ಟದ ಕ್ರೀಡಾ ಶಾಲೆ, ನಿಲಯಕ್ಕೆ ಆಯ್ಕೆ ಬಯಸುವವರು 2023ನೇ ಜನವರಿ 19ರಂದು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.

Also Read  ಮಂಗಳೂರು: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಹೆಚ್ಚಳ

ಹಿರಿಯರ ವಿಭಾಗ:
ಹಿರಿಯ ವಿಭಾಗದ ಕ್ರೀಡಾ ಶಾಲೆ, ವಸತಿ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2023-24ನೇ ಸಾಲಿಗೆ ಪ್ರಥಮ ಪಿ.ಯು.ಸಿ. ಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, 2023ನೇ ಜೂನ್ 1ಕ್ಕೆ 17 ವರ್ಷದೊಳಗಿರಬೇಕು. ಹಿರಿಯ ವಿಭಾಗಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು 2023ನೇ ಜನವರಿ 19ರಂದು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಬೇಕು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಂಬಂಧಪಟ್ಟ ತಾಲೂಕುಗಳಲ್ಲಿ ಭಾಗವಹಿಸಬೇಕು. ಸಂಬಂಧಪಟ್ಟ ತಾಲೂಕಿನಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ ಜಿಲ್ಲೆಯ ಇತರೆ ತಾಲೂಕಿನಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರ ಆಯ್ಕೆ ಸಮಯದಲ್ಲಿ ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ತರಬೇತುದಾರರ ಮೊಬೈಲ್ ಸಂಖ್ಯೆ: 7019144302, 9008848289 ಹಾಗೂ ಮಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ದೂರವಾಣಿ ಸಂಖ್ಯೆ: 0824- 2451264 ಅನ್ನು ಸಂಪರ್ಕಿಸಬಹುದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಗಿರಿಧರ ಭಟ್ ರವರಿಂದ ಮಾಹಿತಿ ದಿನ ಭವಿಷ್ಯ

error: Content is protected !!
Scroll to Top