ಅನೈತಿಕ ದಂಧೆಗಿಳಿದ ಮಂಗಳಮುಖಿಯರು..! ➤ ಖುದ್ದು ಕಾರ್ಯಾಚರಣೆಗಿಳಿದ ಎಸ್ಪಿ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 16. ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪ ಮಂಗಳಮುಖಿಯರು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದಾಗಿ ದೂರು ಕೇಳಿಬಂದ ಹಿನ್ನೆಲೆ ಡಿ.16 ರಂದು ತಡರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ಸ್ವತಃ ಕಾರ್ಯಾಚರಣೆ ನಡೆಸಿ ಇಬ್ಬರು ಪಿಂಪ್‌ಗಳನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಸರ್ವಿಸ್ ನಿಲ್ದಾಣದ ಸಮೀಪ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡ ಕೆಲವು ಮಂಗಳಮುಖಿಯರು, ವಾಹನಗಳನ್ನು ಅಡ್ಡ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುವುದು, ಅಲ್ಲದೇ ದಾರಿದೀಪವನ್ನು ಒಡೆದು ಹಾಕಿದ್ದಾರೆ ಮತ್ತು ಜನರಿಂದ ಹಣ ವಸೂಲಿ ಮಾಡುತ್ತಾರೆಂಬ ದೂರಿನ ಹಿನ್ನೆಲೆ ಸ್ವತಃ ಎಸ್ಪಿಯವರೇ ಸ್ಥಳಕ್ಕಾಗಮಿಸಿ ಮಂಗಳಮುಖಿಯರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾಗಿದ್ದಾರೆ. ಕೆಲವು ಮಂಗಳಮುಖಿಯರು ವಾಗ್ವಾದಕ್ಕೆ ಇಳಿದಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸಿದರು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಗ್ರಾಹಕರನ್ನು ರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇಬ್ಬರು ಪಿಂಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮೌಲ್ಯಮಾಪನಕ್ಕೆ ಗೈರು ಹಾಜರಾದ 6 ಸಾವಿರ ಉಪನ್ಯಾಸಕರು   ➤ ಮೌಲ್ಯಮಾಪನ ಮಂಡಳಿ ಕಠಿಣ ಕ್ರಮದ ಎಚ್ಚರಿಕೆ.!!  

error: Content is protected !!
Scroll to Top