ಕಡಬದ ಸಾಹಿತಿ ದಿ| ಗೋಪಾಲ್ ರಾವ್‌ರ ಕವನ ಸಂಕಲನ ಬಿಡುಗಡೆ ► ಸಾಹಿತಿಯ ಮರಣಾ ನಂತರ ಬಿಡುಗಡೆಗೊಂಡ ‘ತಾಯಿಯ ಕರೆ’

(ನ್ಯೂಸ್ ಕಡಬ) newskadaba.com ಮಂಗಳೂರು, ‌ನ.20. ಇತ್ತೀಚಿಗೆ ನಿಧನರಾದ ಕಡಬದ ಹಿರಿಯ ಸಾಹಿತಿ ದಿ| ಗೋಪಾಲ್‌ ರಾವ್‌ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಾಗೂ ಅವರ ಕವನ ಸಂಕಲನ ಬಿಡುಗಡೆ ಸಮಾರಂಭವು ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಗೋಪಾಲ್ ರಾವ್‌ರವರ ಜೀವಿತಾವಧಿಯಲ್ಲಿ ಅವರು ರಚಿಸಿದ ಕವನಗಳ ಕವನ ಸಂಕಲನ ‘ತಾಯಿಯ ಕರೆ’ ಎಂಬ ಪುಸ್ತಕವನ್ನು ಅವರ ಹಿರಿಯ ಪುತ್ರ ಚಲನಚಿತ್ರ ನಿರ್ದೇಶಕ ಶರತ್ ಬಿಳಿನೆಲೆ ಅವರ ಸಂಪಾದಕತ್ವದಲ್ಲಿ, ಪುತ್ರಿ ಸೌಮ್ಯ ಸತೀಶ್ ಭಟ್ ಅವರು ಹೊರ ತಂದಿದ್ದು ಇದನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಐತ್ತಪ್ಪ ನಾಯ್ಕ್ ಬಿಡುಗಡೆಗೊಳಿಸಿ ಮಾತನಾಡಿ ಗೋಪಾಲ್ ರಾಯರು ನಡೆಸಿದ ಆದರ್ಶ ಬದುಕು, ಸಾಹಿತ್ಯ ಕೃಷಿ, ಧಾರ್ಮಿಕ ಚಿಂತನೆ, ಸಾಮಾಜಿಕ ಕಳಕಳಿ ಇಡೀ ಕಡಬದ ಜನತೆಗೆ ದಾರಿ ದೀಪವಾಗಿದೆ. ಕಡಬದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರ ಅಧ್ಯಕ್ಷತೆ ಕಡಬಕ್ಕೆ ಸಂದ ದೊಡ್ಡ ಗೌರವವಾಗಿತ್ತು. ಆದರೆ ಅದನ್ನು ಕಾಣುವ ಸೌಭಾಗ್ಯ ನಮಗೆ ಇಲ್ಲ. ಆದರೂ ಅವರ ನೆನಪು ನಮ್ಮೆಲ್ಲರ ಜೀವನದ ಉದ್ದಕ್ಕೂ ಪಸರಿಸಲಿದೆ ಎಂದರು.

Also Read  ಅರಂತೋಡು: ಉಪನ್ಯಾಸಕರಿಂದ ಸಾಂಪ್ರದಾಯಿಕ ನೇಜಿ ನಾಟಿ ಪಾಠ

ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ ಮಾತನಾಡಿ ಗೋಪಾಲ ರಾಯರು ಜೀವನದ ಪ್ರತೀ ಪಾತ್ರಗಳನ್ನು ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನಿರ್ವಹಿಸಿ ಒಬ್ಬ ಆದರ್ಶಪುರುಷನಾಗಿ ನಮಗೆಲ್ಲಾ ಪ್ರೇರಣಾ ಶಕ್ತಿಯಾಗಿದ್ದಾರೆ. ಸಾಹಿತಿಯಾಗಿ, ಶಿಕ್ಷಕನಾಗಿ, ಕಲಾವಿದನಾಗಿ, ಧಾರ್ಮಿಕ ಚಿಂತಕರಾಗಿ ದೈವೀ ಪ್ರೇರಣೆಯಿಂದ ಸಮಾಜ ಕಟ್ಟುವ ಕಾರ್ಯ ಮಾಡಿದ್ದಾರೆ ಎಂದರು.

ಬ್ರಹ್ಮಶ್ರೀ ವಾಗೀಶ ತಂತ್ರಿ, ಎ.ಪಿ.ಎಂ.ಸಿ ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಸತೀಶ್ ನಾಯಕ್, ಹಿರಿಯ ಯಕ್ಷಗಾನ ಕಲಾವಿಧ ಮಹಮ್ಮದ್ ಕುಂಞಿ, ಮೊದಲಾದವರು ಮೃತರ ಗುಣಗಾನ ಮಾಡಿದರು. ಸಾಹಿತಿ ಶಿವರಾಮ ಶಿಶಿಲ ಗೋಪಾಲ್ ರಾವ್ ಅವರ ಬಗೆಗಿನ ಸ್ವರಚಿತ ಕವನ ವಾಚಿಸಿದರು.

ವೇದಿಕೆಯಲ್ಲಿ ಜಗನ್ನಾಥ ರಾವ್ ಮುಂಬಯಿ, ನಿವೃತ್ತ ಸೈನಿಕ ಜನಾರ್ಧನ ರಾವ್, ಪ್ರಮುಖರಾದ ಜಿನ್ನಪ್ಪ ಸಾಲ್ಯಾನ್, ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಅಲಂಗೂರು, ಜ್ಞಾನೇಶ್ ರಾವ್, ಶರತ್ ಬಿಳಿನೆಲೆ ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ರಾವ್ ತಲೇಕಿ ಕಾರ್ಯಕ್ರಮ ನಿರೂಪಿಸಿದರು.

Also Read  ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ವರ್ಗಾವಣೆ         ➤  ರೈಲ್ವೇ ಡಿಐಜಿಯಾಗಿ ನೇಮಿಸಿದ ಸರಕಾರ

error: Content is protected !!
Scroll to Top