ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಹಶೀಲ್ದಾರ್ ಸಹಾಯಕ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 01. ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಸಹಾಯಕನನ್ನು ರೆಡ್ ಹ್ಯಾಂಡಾಗಿ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

 

ಆರೋಪಿಯನ್ನು ಶಿವಾನಂದ ನಾಟೇಕರ್ ಎಂದು ಗುರುತಿಸಲಾಗಿದೆ. ಇವರು ಜಾಗ ಮಾರಾಟದ ಸಲುವಾಗಿ ಎನ್ಓಸಿ ಪಡೆಯಲು ಬಂದಿದ್ದ ಅರ್ಜಿದಾರ ವ್ಯಕ್ತಿಯ ಬಳಿ ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಅರ್ಜಿದಾರರು ಮಂಗಳೂರಿನ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೊನೆಗೆ ಐದು ಸಾವಿರ ನೀಡುವುದಾಗಿ ಹೇಳಿ ಒಪ್ಪಂದ ಆಗಿತ್ತು. ಅಧಿಕಾರಿಗಳ ಸೂಚನೆಯಂತೆ, ಶುಕ್ರವಾರ ಮಧ್ಯಾಹ್ನ 4,700 ರೂಪಾಯಿ ಲಂಚ ನೀಡುತ್ತಿದ್ದಾಗಲೇ ದಾಳಿ ನಡೆಸಿದ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಹಾಗೂ ಡಿವೈಎಸ್ಪಿ ಚೆಲುವರಾಜ್ ನೇತೃತ್ವದ ತಂಡವು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಶಿವಾನಂದ ನಾಟೇಕರ್ ಈ ಹಿಂದೆ ಕಾವೂರಿನಲ್ಲಿ ವಿಎ ಆಗಿದ್ದು ಅಲ್ಲಿಯೂ ಲಂಚಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದು ಅಮಾನತಾಗಿದ್ದ. ಇತ್ತೀಚೆಗಷ್ಟೇ ಮಂಗಳೂರು ತಾಲೂಕು ಕಚೇರಿಗೆ ನಿಯೋಜನೆಗೊಂಡಿದ್ದ ಎನ್ನಲಾಗಿದೆ.

error: Content is protected !!

Join the Group

Join WhatsApp Group