ಉಳ್ಳಾಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಕಣಜದ ಹುಳುಗಳ ದಾಳಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 06. ತೆಂಗಿನಕಾಯಿ ಕೀಳಲು ಮರವೇರಿದ ವೇಳೆ ಗೂಡುಕಟ್ಟಿದ್ದ ಕಣಜದ ಹುಳುಗಳು ದಾಳಿ ನಡೆಸಿದ ಪರಿಣಾಮ ಕಾಯಿ ಕೀಳುವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ತಂದೆ ಹಾಗೂ ಮಗಳಿಗೂ ಹುಳುಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತೊಕ್ಕೊಟ್ಟು ಸಮೀಪದ ಉಳ್ಳಾಲ ಬೈಲು ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಉಳ್ಳಾಲ ಬೈಲು ನಿವಾಸಿ ಜಿತನ್‌ ರೆಸ್ಕಿನ(40), ಪ್ರವೀಣ್ ಪೂಜಾರಿ ಹಾಗೂ ಅವರ ಮಗಳು ದೃತಿ ಎಂದು ಗುರುತಿಸಲಾಗಿದೆ. ಜಿತನ್ ಅವರು ವೃತ್ತಿಪರ ತೆಂಗಿನಕಾಯಿ ಕೀಳುವವರಾಗಿದ್ದು, ಇಂದು ಬೆಳಗ್ಗೆ ಉಳ್ಳಾಲ ಬೈಲಿನ ಭವಾನಿ ಎಂಬವರ ಮನೆಯಲ್ಲಿ ಮರವೇರುವ ಯಂತ್ರದ ಮೂಲಕ ಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾಏಕಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ನೊಣಗಳ ದಾಳಿಯ ರಭಸಕ್ಕೆ ಜಿತನ್ ಅವರು ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಲ್ಲದೇ, ಪಕ್ಕದ ರಸ್ತೆಯಲ್ಲಿ ಮಗಳನ್ನು ಶಾಲಾ ವಾಹನಕ್ಕೆ ಬಿಡಲೆಂದು ಬಂದಿದ್ದ ಸ್ಥಳೀಯ ಬಾಡಿಗೆ ಮನೆ ನಿವಾಸಿ ಪ್ರವೀಣ್ ಪೂಜಾರಿ ಮತ್ತು ಅವರ ಮಗಳು ಧೃತಿಗೂ ಹುಳುಗಳು ದಾಳಿ ನಡೆಸಿ ಗಾಯಗಳಾಗಿದ್ದು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Also Read  ಸಣ್ಣ ಎಲ್ಇಡಿ ಬಲ್ಬ್ ನುಂಗಿದ ಒಂಬತ್ತು ತಿಂಗಳ ಮಗು

error: Content is protected !!
Scroll to Top