ಪರ್ಲಡ್ಕ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬಳಿಕ ಬಸ್ ಢಿಕ್ಕಿ ಹೊಡೆದ ಬೈಕ್ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 04. ಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಬಸ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರದಂದು ರಾತ್ರಿ ಪರ್ಲಡ್ಕದಲ್ಲಿ ನಡೆದಿದೆ.

ಮೃತಪಟ್ಟವರನ್ನು ವೀರಮಂಗಲದ ಭರತ್‌ರಾಜ್ ಗೌಡ ಎಂದು ಗುರುತಿಸಲಾಗಿದೆ. ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಗೆಂದು ಬಂದಿದ್ದ ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್ ಮತ್ತು ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡರವರು ಬಂದಿದ್ದ ಡ್ಯೂಕ್ ಬೈಕ್‌ ಪರ್ಲಡ್ಕ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಮಂಗಳೂರು ಕಡೆ ಹೋಗುತ್ತಿದ್ದ ಬಸ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಭರತ್‌ರಾಜ್ ಗೌಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಇನ್ನೋರ್ವ ಧನುಷ್ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ನಡೆದ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ‌ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಅವರು ತಕ್ಷಣ ಗಾಯಳುಗಳನ್ನು ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

error: Content is protected !!
Scroll to Top