ಆಲಂಕಾರು: ಕತ್ತಿಯಿಂದ ಕಡಿದು ಜೀವಬೆದರಿಕೆ ಆರೋಪ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಆಲಂಕಾರು ಕಲ್ಲೇರಿ ನಿವಾಸಿ ಜಯಕರ ಪೂಜಾರಿ ನೀಡಿದ ದೂರಿನಂತೆ ಭಾಸ್ಕರ ಎಂಬವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಈ ಕುರಿತು ಜಯಕರ ಪೂಜಾರಿಯವರು, ‘ನಾನು ಆಲಂಕಾರು ಪೇಟೆಯಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದು, ಆ.31ರಂದು ಸಂಜೆಯ ವೇಳೆಗೆ ಆರೋಪಿ ಭಾಸ್ಕರ ಎಂಬವರು ಹೋಟೆಲ್‌ಗೆ ಮದ್ಯದ ಬಾಟಲಿಯನ್ನು ಹಿಡಿದುಕೊಂಡು ಬಂದು ಸೋಡಾ ಕೊಡುವಂತೆ ಕೇಳಿದಾಗ ಇಲ್ಲಿ ಮದ್ಯ ಕುಡಿಯಬೇಡಿ ಎಂದು ಹೇಳಿದಾಗ ಆರೋಪಿಯು ಸೋಡಾವನ್ನು ತೆಗೆದುಕೊಂಡು ಅಲ್ಲಿಯೇ ಗ್ಲಾಸ್‌ನಲ್ಲಿ ಹಾಕಿಕೊಂಡು ಮದ್ಯ ಸೇವನೆ ಮಾಡಿದ್ದು, ಬಳಿಕ ಆತನಿಗೆ ವಾಂತಿ ಬಂದು ಇಲ್ಲಿ ವಾಂತಿ ಮಾಡಬೇಡಿ ಎಂದು ಹೇಳಿದಾಗ ಒಂದು ಸೋಡಾಕ್ಕೆ ಹತ್ತು ರೂಪಾಯಿ ತೆಗೆದುಕೊಳ್ಳುತ್ತೀಯಾ ಎಂದು ಬೈದು, ಬಳಿಕ ನಮ್ಮೊಳಗೆ ಜಗಳವಾಗಿದೆ. ಈ ವೇಳೆ ಆರೋಪಿಯು ಹೊರಗೆ ಹೋಗಿ ಆತನ ಆಟೋರಿಕ್ಷಾದಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಬಂದು ಹೋಟೆಲ್‌ನಲ್ಲಿದ್ದ ನನಗೆ ಕಡಿದಿದ್ದು ನಾನು ಹಿಂದೆ ಸರಿದಿದ್ದರಿಂದ ಕತ್ತಿಯು ಎಡ ಕೈಗೆ ತಾಗಿ ಗಾಯವಾಗಿದೆ. ನಂತರ ಆರೋಪಿಯು ಸೆ.1ರಂದು ಬೆಳಗ್ಗೆ 10 ಗಂಟೆಗೆ ಮತ್ತೆ ಹೋಟೇಲ್‌ಗೆ ಬಂದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ’ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 504, 324, 506ರಂತೆ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group