ಈಶ್ವರಮಂಗಲ: ತ್ವೈಬಾ ಸಂಸ್ಥೆಯ ದಶಮಾನೋತ್ಸವ ಸಮ್ಮೇಳನ ಯಶಸ್ವಿಗೊಳಿಸಲು SYS ಈಸ್ಟ್ ಜಿಲ್ಲಾ ಸಮಿತಿ ಕರೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 20. ಪುತ್ತೂರು ತಾಲೂಕಿಗೊಳಪಟ್ಟ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಈಶ್ವರಮಂಗಲ ಅಹ್ದಲ್ ನಗರದಲ್ಲಿ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಭ್ಯಾಸ ನೀಡುವ ತೈಬಾ ಎಜ್ಯುಕೇಶನ್ ಸೆಂಟರ್ ಇದರ ದಶವಾರ್ಷಿಕ ಸಮ್ಮೇಳನವು ಆಗಸ್ಟ್ 19, 20, 21 ದಿನಾಂಕಗಳಲ್ಲಿ ನಡೆಯುತ್ತಿದೆ.

ಮೌಲ್ಯಯುತ ಶಿಕ್ಷಣ ಪಡೆದ ಸುಶಿಕ್ಷಿತ ಸಮಾಜದಿಂದಲೇ ಸೌಹಾರ್ದಯುತ ದೇಶವನ್ನು ಕಟ್ಟಲು ಸಾದ್ಯವಾಗಬಹುದೆಂಬ ಚಿಂತನೆಯ ಭಾಗವಾಗಿ ಶ್ರೇಷ್ಠ ಮಟ್ಟದ ವಿದ್ಯಾಭ್ಯಾಸ ಸಂಸ್ಥೆಯೊಂದು ಈಶ್ವರಮಂಗಲದಲ್ಲಿ ತಲೆಎತ್ತಿ ನಿಂತಿದೆ. ಶಿಕ್ಷಣ ಕ್ರಾಂತಿಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಕಾರ್ಯಚರಿಸುತ್ತಿರುವ ತೈಬಾ ಸೆಂಟರ್‌ನಲ್ಲಿ ಸಮಾಜದ ಬೆಳೆವಣಿಗೆಗೆ ಪೂರಕವಾದ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣ ನೀಡಲಾಗುತ್ತಿದೆ. ಸೆಕೆಂಡರಿ ಮದರಸ, ಟ್ಯೂಶನ್ ಸೆಂಟರ್, ವಿಶಾಲವಾದ ಮಸೀದಿ, ಸಾಪ್ತಾಹಿಕ, ಮಾಸಿಕ, ಆಧ್ಯಾತ್ಮಿಕ ಮಜ್ಲಿಸ್ ಗಳು, ಮಹಿಳಾ ತರಗತಿಗಳು ಜೊತೆಗೆ ಸಾಂತ್ವನ ಸ್ಪರ್ಶದ ಅನೇಕಾರು ರಿಲೀಫ್ ಚಟುವಟಿಕೆಗಳು ವಿವಿಧ ಹಂತಗಳಲ್ಲಿ ಅಗತ್ಯಕ್ಕನುಸಾರ ತೈಬ ವತಿಯಿಂದ ನಡೆಯುತ್ತಿದೆ. ನೂರಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಆಶಾ ಕೇಂದ್ರವಾಗಿ ಕಾರ್ಯಚರಿಸುವ ತೈಬಾ ಸೆಂಟರ್ ಮಕ್ಕಳ ಊಟ, ವಸತಿ, ಶಿಕ್ಷಣ ಸಹಿತ ಎಲ್ಲವನ್ನೂ ದಾನಿಗಳ ಸಹಕಾರದೊಂದಿಗೆ ಸೌಜನ್ಯವಾಗಿ ಸಮರ್ಥವಾಗಿ ನಿಭಾಯಿಸುತ್ತಿದೆ. ಇದೀಗ ಸಂಸ್ಥೆಯ ದಶವಾರ್ಷಿಕ ಸಮ್ಮೇಳನ ಉಲಮಾ ಸಾದಾತ್ ನಾಯಕರು, ರಾಜಕೀಯ ಸಾಮಾಜಿಕ ಧುರೀಣರ ಸಹಿತ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ವಿಶೇಷವಾಗಿ ದಿನಾಂಕ 21 ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಉಸ್ತಾದ್ ಭಾಗವಹಿಸಲಿದ್ದಾರೆ. ಮೂರು ದಿನಗಳಲ್ಲಾಗಿ ನಡೆಯುವ ತೈಬಾ ಎಜ್ಯುಕೇಶನ್ ಸೆಂಟರ್ ದಶವಾರ್ಷಿಕ ಸಮ್ಮೇಳನದಲ್ಲಿ ಸಂಸ್ಥೆ ಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸನದುದಾನ ವಿತರಣೆ ನಡೆಯಲಿದೆ. ಅದೇ ರೀತಿಯಲ್ಲಿ ಧ್ವಜಾರೋಹಣ, ಉದ್ಘಾಟನಾ ಸಂಗಮ, ಬುರ್ದಾ ಮಜ್ಲಿಸ್, ಅನಿವಾಸಿ ಕನ್ನಡಿಗರ ಫ್ಯಾಮಿಲಿ ಮೀಟ್, ಮತಪ್ರಭಾಷಣ, ಸಾಂಘಿಕ ಸಂಗಮ, ಸಹಿತ ಸಭೆ ಸೆಮಿನಾರುಗಳು ನಡೆಯಲಿದೆ. ಇದೆಲ್ಲವನ್ನು ಸೆಂಟರ್, ಬ್ರಾಂಚ್‌ಗಳಲ್ಲಿ ಪ್ರಚಾರಪಡಿಸಿ ತೈಬಾ ಸಮ್ಮೇಳನ ಯಶಸ್ವಿಗೊಳಿಸುವಂತೆ ಎಸ್ ವೈ ಎಸ್ ಈಸ್ಟ್ ಅಧ್ಯಕ್ಷರಾದ ಮಜೂರು ಅಬೂಬಕರ್ ಸ‌ಅದಿ ಉಸ್ತಾದ್ ಕರೆ ನೀಡಿದ್ದಾರೆ.

error: Content is protected !!
Scroll to Top