ಸರ್ಕಾರದ ದುರಾಡಳಿತದ ವಿರುಧ್ದ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಜೈಲಿಗಟ್ಟಿದ ಕೊಪ್ಪಳ ಪೋಲಿಸರ ನಡೆ ಖಂಡನೀಯ- ಕ್ಯಾಂಪಸ್ ಫ್ರಂಟ್ ➤ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದಲ್ಲಿ “ಕೊಪ್ಪಳ ಚಲೋ”

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 02. ರಾಜ್ಯ ಸರ್ಕಾರದ ದುರಾಡಳಿತ ಹಾಗೂ ತಾರತಮ್ಯ ಧೋರಣೆಯ ವಿರುದ್ಧ ಪ್ರತಿಭಟಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಕಾರ್ಯಕರ್ತರ ಬಂಧನವನ್ನು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವು ಒಂದು ವರ್ಷದಿಂದ ದ್ವೇಷದ, ತಾರತಮ್ಯದ ಆಡಳಿತ ನಡೆಸುತ್ತಿದ್ದು ಇದನ್ನು ವಿರೋಧಿಸಿ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಬಂಧನ ಮಾಡಿ ಹಿಂಸಿಸಿ ಜೈಲಿಗಟ್ಟಿದ ಕೊಪ್ಪಳ ಪೊಲೀಸರ ಕ್ರಮ ಖಂಡನೀಯ. ತಕ್ಷಣವೇ ಬಂಧಿತ ವಿದ್ಯಾರ್ಥಿಗಳ ಮೇಲೆ ದಾಖಲಿಸಿದ ಕೇಸನ್ನು ವಾಪಾಸು ಪಡೆದು ಬಿಡುಗಡೆಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೋಲಿಸರ ಮೇಲೆ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು ಎಂದು ಆಗ್ರಹಿಸುತ್ತಾ ಈ ದಿನ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆಯನ್ನು ನೀಡಿದ್ದೇವೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕೊಪ್ಪಳ ಚಲೋ’ದಂತಹ ಹೋರಾಟಗಳನ್ನು ನಡೆಸಬೇಕಾದೀತು ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಅದರಲ್ಲೂ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ಆರ್ ಎಸ್ಎಸ್ ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಒಂದು ವರ್ಷದ ಬೊಮ್ಮಾಯಿ ಆಡಳಿತದಲ್ಲಿ ದಿನನಿತ್ಯ ವಿವಿಧ ವಿವಾದಗಳು ರಾಜ್ಯದಲ್ಲಿ ಕಂಡುಬಂದಿದ್ದು ಗಮನಿಸಬಹುದಾಗಿದೆ. ಶೈಕ್ಷಣಿಕ ರಂಗದಲ್ಲಾಗಲಿ, ಸಾಮಾಜಿಕ ರಂಗದಲ್ಲಾಗಲಿ ಅಭಿವೃದ್ದಿಯ ವಿಷಯದಲ್ಲಾಗಲಿ ಯಾವುದೇ ಬೆಳವಣಿಗೆಗಳು ಈ ಅವಧಿಯಲ್ಲಿ ಕಂಡುಬಂದಿಲ್ಲ ಬದಲಾಗಿ 40% ಕಮಿಷನ್ ದಂಧೆ, ಭ್ರಷ್ಟಾಚಾರ, ಹಿಜಾಬ್, ಹಲಾಲ್, ವ್ಯಾಪಾರ ವಹಿವಾಟು ನಿರ್ಬಂದ, ಪಿಎಸ್ಐ ಹಗರಣ, ಮೊಟ್ಟೆ ಹಗರಣ, ಸಮವಸ್ತ್ರ ಹಗರಣ, ಪ್ರಚೋದನಕಾರಿ ಭಾಷಣಗಳು ಇದೀಗ ಇದನ್ನೆಲ್ಲಾ ಮರೆಮಾಚಲು ಶವ ರಾಜಕೀಯ ನಡೆಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಅದರಲ್ಲೂ ಅಲ್ಪಸಂಖ್ಯಾತರನ್ನು ನೇರವಾಗಿ ಗುರಿಯಾಗಿಸಿದ ಸರ್ಕಾರ ರಾಜ್ಯದ ಅಲ್ಪಸಂಖ್ಯಾತರಿಗೆ ಮುಖ್ಯಮಂತ್ರಿ ಇದ್ದಾರೋ? ಎಂಬ ಸಂಶಯ ಮೂಡಿದೆ. ದ.ಕ ಜಿಲ್ಲೆಯಲ್ಲಿ ಮೂರು ಸರಣಿ ಹತ್ಯೆಗಳು ನಡೆದಿದ್ದರೂ ಪರಿಹಾರ ಒದಗಿಸುವುದರಲ್ಲೂ ತಾರತಮ್ಯ ಧೋರಣೆಯನ್ನು ತೋರ್ಪಡಿಸುತ್ತಿರುವ ಬೊಮ್ಮಾಯಿ ಯಾರನ್ನು ಸಂತೋಷಪಡಿಸಲು ಹೊರಟಿದೆ ಎಂದು ವ್ಯಕ್ತಪಡಿಸಬೇಕಾಗಿದೆ. ಆದರೆ ಇದನ್ನೆಲ್ಲಾ ಖಂಡಿಸಿ ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿದರೆ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ಈ ಬೊಮ್ಮಾಯಿ ಸರ್ಕಾರದ ದುರಾಡಳಿತ ಕೊನೆಗೊಳ್ಳಬೇಕಾಗಿದೆ.‌ಸರ್ಕಾರ ತಮ್ಮ ಅಧಿಕಾರವನ್ನು ಎಷ್ಟೇ ದುರುಪಯೋಗಪಡಿಸಿ ಭಿನ್ನಧ್ವನಿಗಳನ್ನು ಧಮನಿಸಲು ಪ್ರಯತ್ನಿಸಿದರೂ ರಾಜ್ಯ ಸರ್ಕಾರದ ಈ ದ್ವೇಷ ಆಡಳಿತವನ್ನು ಬೀದಿ ಬೀದಿಗಳಲ್ಲಿ ವಿದ್ಯಾರ್ಥಿ ಸಮೂಹ ಇನ್ನೂ ಕೂಡಾ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಲಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಝುಬೈರ್ ಬೆಂಗಳೂರು ಹಾಗೂ ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು ಉಪಸ್ಥಿತರಿದ್ದರು.

Also Read  ಚಲಿಸುತ್ತಿದ್ದ ಎಲೆಕ್ಟ್ರಿಕ್ ಕಾರು ಬೆಂಕಿಗಾಹುತಿ- ಸುಟ್ಟು ಕರಕಲು

error: Content is protected !!
Scroll to Top