ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಕಾರ್ಗಿಲ್ ದಿನಾಚರಣೆ ➤ ಹುತಾತ್ಮ ಸೈನಿಕರ ಬಲಿದಾನ ವ್ಯರ್ಥವಾಗದಿರಲಿ- ಡಾ| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಮೇರಿಹಿಲ್‍ನ ಜಿಲ್ಲಾ ಗೃಹರಕ್ಷಕದಳ ಕಛೇರಿ ಇಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್‍ನಲ್ಲಿ ಹುತಾತ್ಮರಾದವರಿಗೆ ಗೌರವ ನಮನವನ್ನು ಸಲ್ಲಿಸುತ್ತಾ, 23ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ವಹಿಸಿದ್ದರು.

1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ರವರು ಮಾತನಾಡಿ, ದೇಶಕ್ಕಾಗಿ ಪ್ರಾಣವನ್ನೇ ತೆತ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ, ಆ ಸಮಯದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿಯವರು ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿರುವ ಸಮಯದಲ್ಲಿ ಪಾಪಿ ಪಾಕಿಸ್ತಾನ ಕಾರ್ಗಿಲ್ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ಕಳುಹಿಸಿ ಆಕ್ರಮಣ ಮಾಡಿದ್ದರು. ಮೇ. 5 ರಂದು ಕಾರ್ಗಿಲ್ ಯುದ್ಧ ಆರಂಭವಾಗಿ ಜುಲೈ 26 ರಂದು ಕೊನೆಗೊಂಡಿರುತ್ತದೆ. ಒಟ್ಟು 74 ದಿನಗಳ ಕಾರ್ಗಿಲ್ ಕದನದಲ್ಲಿ ಭಾರತದ 2,00,000 ಸೈನಿಕರು ದೇಶಕ್ಕಾಗಿ ಕಿಚ್ಚೆದೆಯಿಂದ ಹೋರಾಡಿದರು. ಸುಮಾರು 500ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿ ಹುತಾತ್ಮರಾದರು. ಆಪರೇಷನ್ ವಿಜಯ್ ಮುಖಾಂತರ ಭಾರತದ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿದ ಸವಿನೆನಪಿಗಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ದೇಶದೆಲ್ಲೆಡೆ ಆಚರಿಸಿ ದೇಶಕ್ಕೆ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ದೇಶ ಸೇವೆಗಾಗಿ ಪುನರ್‌ ಸಮರ್ಪಿಸುವ ವಿಶೇಷ ದಿನ ಎಂದು ಅವರು ಅಭಿಪ್ರಾಯಪಟ್ಟರು ಹಾಗೂ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲ ಹಾರೈಸೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್ ಶೇರಾ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group