ಸಂಚಾರಕ್ಕೆ ಅಯೋಗ್ಯವಾಗಿರುವ ಕಾಯರಡ್ಕ – ಪೇರಡ್ಕ ರಸ್ತೆ ► ಶೀಘ್ರದಲ್ಲೇ ಆಗಬೇಕಿದೆ ರಸ್ತೆಗೆ ಡಾಮರೀಕರಣ

(ನ್ಯೂಸ್ ಕಡಬ) newskadaba.com ಕಡಬ, ನ.12. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬದಲ್ಲಿ ದಿನೇ ದಿನೇ ಜನ ಸಂಚಾರ ಹೆಚ್ಚಾಗುತ್ತಿದ್ದು, ಪ್ರಸ್ತಾವಿತ ಸುಮಾರು 35 ಗ್ರಾಮಗಳಿಂದ ಕಛೇರಿ ಕೆಲಸಗಳಿಗಾಗಿ ಕಡಬಕ್ಕೆ ಬರುವುದು ಅನಿವಾರ್ಯ.

ಕಡಬ ಪೇಟೆಯಿಂದ ಕೇವಲ ಮೂರು ಕಿಮೀ ದೂರದಲ್ಲಿರುವ ಕಾಯರಡ್ಕದಿಂದ ಪೇರಡ್ಕದ ವರೆಗಿನ ಎರಡು ಕಿಮೀ ರಸ್ತೆಯು ಇಲ್ಲಿನ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜಾಣ ಕುರುಡುತನದಿಂದಾಗಿ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದೆ. ಈ ರಸ್ತೆಯು ಕಡಬದಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಈ ರಸ್ತೆಯ ಮೂಲಕ ದಿನಂಪ್ರತಿ ನೂರಾರು ವಾಹನಗಳು, ಸಾನ್ ತೋಂ ಶಾಲೆ, ನೂಜಿಬಾಳ್ತಿಲ ಬೆಥನಿ ಕಾಲೇಜು ಮಕ್ಕಳು, ಬೆಥನಿ ಚರ್ಚ್, ಇಚಿಲಂಪಾಡಿ ಚರ್ಚ್, ಕೇಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ, ನೂಜಿ ಶ್ರೀ ಅಮ್ಮನವರ ದೇವಸ್ಥಾನ, ಪೊಸೋಳಿಕೆ ಮಸೀದಿ, ಕಲ್ಲುಗುಡ್ಡೆ ಮಸೀದಿ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಅನೇಕ ಜನರು ಹೊಂಡ ಗುಂಡಿಗಳಿಂದ ಕೂಡಿದ ಇದೇ ರಸ್ತೆಯ ಮೂಲಕ ಸಂಚರಿಸುವಂತಾಗಿದೆ.

Also Read  ಮಂಗಳೂರು: ‘ಇಂಡಿಯನ್ ಫ್ರೆಶ್’ ಸಂಸ್ಥೆಯ ನೂತನ ಶಾಖೆ 7ನೇ ಇಂದು ಶುಭಾರಂಭ  

ಈ ರಸ್ತೆಯನ್ನು ಜನರ ಕಣ್ಣಿಗೆ ಮಣ್ಣು ಹಾಕುವ ಸಲುವಾಗಿ ಒಂದೆರಡು ಕಡೆಗಳಲ್ಲಿ ಕಾಂಕ್ರೀಟ್ ಮಾಡಲಾಗಿದ್ದು, ಅದೂ ಕಿತ್ತುಕೊಂಡು ಹೋಗಲಾರಂಭಿಸಿದೆ. ಇನ್ನು ಚುನಾವಣಾ ಸಮಯದಲ್ಲಿ ಪ್ರತಿಬಾರಿ ಮಾಡುವ ತರಹ ಈ ಬಾರಿಯೂ ತೇಪೆ ಹಚ್ಚಿ ಜನರ ಮೇಲೆ ಗೂಬೆ ಕೂರಿಸಲು ರಾಜಕೀಯ ಪಕ್ಷಗಳು ತುದಿಗಾಲಲ್ಲಿ ನಿಂತಿದೆ ಎಂಬುವುದು ಸಾರ್ವಜನಿಕರ ಮಾತು. ಇದೇ ರಸ್ತೆಯ ಪೇರಡ್ಕದಲ್ಲಿರುವ ಸೇತುವೆಯು ಶಿಥಿಲಗೊಂಡಿದ್ದು, ಮೇಲಿನ ತಂತಿಗಳು ಕಾಣಲಾರಂಭಿಸಿವೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇಲ್ಲಿನ ರಸ್ತೆ ಅಭಿವೃದ್ಧಿ ಪಡಿಸಲಿ ಎನ್ನುವುದು ಇಲ್ಲಿನ ಜನರ ಮುಖ್ಯ ಬೇಡಿಕೆಯಾಗಿದೆ.

Also Read  ಕಲ್ಲುಗುಡ್ಡೆ: ಎರಡು ಗೋಣಿ ಅಡಿಕೆ ಕಳವು

✍? ಪ್ರಕಾಶ್ ಕಡಬ

error: Content is protected !!
Scroll to Top