ಕಡಬ: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ವಿಹಿಂಪ ಬಜರಂಗದಳ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜು. 01. ಸಮಾಜಘಾತುಕ ಶಕ್ತಿಗಳನ್ನು ಹುಟ್ಟು ಹಾಕುವ ಸಂಘಟನೆಗಳು ಇಡೀ ಪ್ರಪಂಚದಲ್ಲಿ ಕೋಮು ಪ್ರಚೋದನೆ ಮೂಲಕ ಶಾಂತಿ ಕದಡುತ್ತಿದೆ. ಇಂತಹ ಸಂಘಟನೆಗಳಿಂದ ಹಿಂದೂ ಸಮಾಜ ಸರ್ವ ನಾಶವಾಗುತ್ತಿದೆ. ಹೀಗಾಗಿ ಮತಾಂಧ ಸಂಘಟನೆಗಳನ್ನು ಬಹಿಷ್ಕರಿಸಬೇಕು ಇದಕ್ಕಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ಒಟ್ಟಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಧರ್ಮ ಪ್ರಸಾರ ಪ್ರಮುಖ್ ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದರು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ವತಿಯಿಂದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ರಾಜಸ್ಥಾನದ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಗುರುವಾರ ಕಡಬ ಪೇಟೆಯ ಪಂಜ ಕ್ರಾಸ್ ಬಳಿ ರಾಜ್ಯ ಹೆದ್ದಾರಿಯನ್ನು ಅರ್ಧ ಗಂಟೆಗಳ ಕಾಲ ಸಂಪೂರ್ಣ ಬಂದ್ ಮಾಡಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಹಿಂದೂ ಧರ್ಮದ ಮೇಲೆ ಅಪಾರ ಅಭಿಮಾನ ಬಂದವನು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸನಾಗುತ್ತಾನೆ. ಆದರೆ ಇಸ್ಲಾಂನ ಮೇಲೆ ವಿಪರೀತ ಪ್ರೀತಿ ಬಂದರೆ ಒಸಮಾ ಬಿನ್ ಲಾಡೆನ್ ಆಗುತ್ತಾನೆ. ಲೋಕ ಹಿತವನ್ನು ಬಯಸುವ ಹಿಂದೂ ಧರ್ಮ ಇತರರಿಗೆ ಕೇಡನ್ನು ಬಯಸುವುದಿಲ್ಲ. ನಾವು ಸ್ನೇಹಕ್ಕೂ ಸಿದ್ದ ಸಮರಕ್ಕೂ ಸಿದ್ದ ಎನ್ನುವ ಧ್ಯೇಯ ವಾಕ್ಯದಲ್ಲಿ ಜೀವನ ಮಾಡುವವರು. ಕನ್ನಯ್ಯರಂತಹ ಅಮಾಯಕರನ್ನು ಮೋಸದ ರೀತಿಯಲ್ಲಿ ಕೊಲೆ ಮಾಡಿದ್ದೀರಿ ಅಂತ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುವ ಕನಸನ್ನು ಬಿಟ್ಟು ಬಿಡಿ, ವಿಶ್ವವೇ ಮೆಚ್ಚಿಕೊಂಡ ನಾಯಕರ ಹತ್ತಿರಕ್ಕೂ ನಿಮಗೆ ಸುಳಿಯಲು ಸಾಧ್ಯವಿಲ್ಲ. ಅಮಾಯಕನ ಮೇಲೆ ಕೃತ್ಯವೆಸಗಿದ ಕೊಲೆಗಡುಕರನ್ನು ಗಲ್ಲಿಗೇರಿಸುವ ಶಿಕ್ಷೆ ನೀಡಬೇಕು. ಕಂಟಕವಾಗಿರುವ ಮತೀಯ ಶಕ್ತಿಗಳ ಧಮನಕ್ಕೆ ಹಿಂದೂ ಸಮಾಜ ಸೆಟೆದು ನಿಲ್ಲಬೇಕು. ಸರ್ಕಾರಗಳು ನಮ್ಮ ಜೊತೆ ಕೈಜೋಡಿಸಿ ಹಿಂದೂ ಸಮಾಜಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ವೆಂಕಟ್ರಮಣ ರಾವ್ ಮಂಕುಡೆ, ವಾಸುದೇವ ಕಡ್ಯ, ಚಂದ್ರಶೇಖರ, ಸಂತೋಷ್ ಕೋಡಿಬೈಲು, ಜಯಂತ ಕಲ್ಲುಗುಡ್ಡೆ, ವೆಂಕಟ್ರಮಣ ಕುತ್ಯಾಡಿ, ರಾಜೇಶ್ ಉದನೆ, ಸೀತಾರಾಮ ಗೌಡ ಪೊಸವಳಿಕೆ, ಮಹಿಳಾ ಪ್ರಮುಖ್ ಗೀತಾ ಅಮೈ, ವಿ.ಹಿಂ.ಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ವಾಸುದೇವ ಗೌಡ ಕೊಲ್ಲೆಸಾಗು, ಬಾಲಕೃಷ್ಣ ಡಿ. ಕೋಲ್ಪೆ, ಸುರೇಶ್ ಕೋಟೆಗುಡ್ಡೆ, ಸತೀಶ್ ಎರ್ಕ, ಉಮೇಶ್ ಬಂಗೇರ, ಸತ್ಯನಾರಾಯಣ ಹೆಗ್ಡೆ, ಜಿನಿತ್ ಮರ್ದಾಳ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Also Read  ದೇವರ ವಿಗ್ರಹವನ್ನು ಕದ್ದೊಯ್ದ ಅರ್ಚಕ..!

error: Content is protected !!
Scroll to Top