ಪುತ್ತೂರು: ಭಜನಾಮಂದಿರ ವಿಚಾರವಾಗಿ ಇತ್ತಂಡದ ನಡುವೆ ಹೊಡೆದಾಟ..! ➤ ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 14. ಭಜನಾ ಮಂದಿರದ ಜಾಗದ ವಿಚಾರಕ್ಕೆ ಸಂಬಂಧಿಸಿದ ನಡೆದ ತಂಡದ ನಡುವಿನ ಜಗಳದಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.


ಗಾಯಾಳುಗಳನ್ನು ಆರ್ಯಾಪು ಗ್ರಾಮದ ದೊಡ್ಡಡ್ಕ ಕೊಗ್ಗ ಆಚಾರ್ಯ ಎಂಬವರ ಪತ್ನಿ ಸರೋಜಿನಿ(58), ಅವರ ಪುತ್ರ ನಾರಾಯಣ(35), ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ(44) ಮತ್ತು ಅವರ ಪತ್ನಿ ಪ್ರೇಮಲತಾ(40) ಎಂದು ಗುರುತಿಸಲಾಗಿದೆ.

ಭಜನಾ ಮಂದಿರವಿರುವ ಜಾಗವು ನಮಗೆ 1991ರಲ್ಲಿ ಅಕ್ರಮ ಸಕ್ರಮ ಮೂಲಕ ಮಂಜೂರುಗೊಂಡಿರುವ ಜಾಗವಾಗಿದ್ದು, ಅದರಲ್ಲಿ ನನ್ನ ತಂದೆಯವರು ಮನೆ ದೇವರಿಗೆ ಸಂಬಂಧಿಸಿ ಭಜನಾ ಮಂದಿರ ನಿರ್ಮಿಸಿ ಅಲ್ಲಿ ಭಜನೆಗಾಗಿ ಊರವರನ್ನು ಸೇರಿಸಿಕೊಳ್ಳುತ್ತಿದ್ದರು. ಬಳಿಕ ಸ್ಥಳೀಯರು ಅಲ್ಲಿ ಭಜನಾ ಸಂಘವನ್ನು ರಚಿಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದು, ಈ ಕುರಿತು ಕೇಸು ದಾಖಲಾಗಿರುತ್ತದೆ. ಅಲ್ಲದೇ ಅಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನ್ಯಾಯಾಲಯದಿಂದ ಸ್ಟೇ ಆಗಿರುತ್ತದೆ. ಆಗಿದ್ದರೂ ಭಜನಾ ಮಂಡಳಿಯವರು ಅಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿದ್ದು, ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದು ಗಾಯಗೊಂಡ ಸರೋಜಿನಿಯವರು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ಇನ್ನೊಂದು ತಂಡದ ಪೂವಪ್ಪ, ವೆಂಕಟಕೃಷ್ಣ ಭಟ್, ಸೇಸಪ್ಪ ನಮ್ಮ ಮೇಲೆ ಹುಲ್ಲು ತೆಗೆಯುವ ಮೆಷಿನ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Also Read  ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ➤ ಅಡಿಕೆ ಫಸಲು ವಿಲೇವಾರಿ

error: Content is protected !!
Scroll to Top