ಆಸ್ತಿ ವೈಷಮ್ಯ- ಅಣ್ಣನ ಬಲಿಪಡೆದ ತಮ್ಮ.!!

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ. 07. ಆಸ್ತಿ ವೈಷಮ್ಯಕ್ಕೆ ತನ್ನ ಒಡಹುಟ್ಟಿದ ಅಣ್ಣನನ್ನೇ ತಮ್ಮ ಚೂರಿಯಿಂದ ಇರಿದು ಕೊಲೆಮಾಡಿದ ಮನಕಲುಕುವ ಘಟನೆ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ನಡೆದಿದೆ.

ಕೊಲೆಯಾದವರನ್ನು ಶೇಖರ್ ಎಂದು ಗುರುತಿಸಲಾಗಿದೆ. ಸಹೋದರ ರಾಜು ಕೊಲೆಗೈದ ಆರೋಪಿ. ತಾಯಿಗೆ ಮಂಜುರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದರೆ, ಅಣ್ಣನೊಂದಿಗಿರುವ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್ ಮಾಡಿ ವಾಸವಾಗಿದ್ದನು. ರವಿವಾರದಂದು ಶೇಖರ್ ಮನೆಯ ಅಂಗಳದಲ್ಲಿ ಇತರ ಮೂವರು ಕೆಲಸಗಾರರೊಂದಿಗೆ ಜಲ್ಲಿಯನ್ನು ಹೊತ್ತು ತರುತ್ತಿದ್ದರು. ಅಲ್ಲಿಗೆ ಪಾನಮತ್ತನಾಗಿ ಬಂದ ರಾಜು ಮನೆಯಲ್ಲಿ ದುರಸ್ತಿ ಕೆಲಸ ಮಾಡದಂತೆ ವಿರೋಧಿಸಿದ್ದು, ಅದಕ್ಕೆ ಕಿವಿಗೊಡದ ಶೇಖರ್ ಕೆಲಸ ಮುಂದುವರೆಸಿದ್ದನು. ಬಳಿಕ ನಿನಗೆ ಕಲಿಸುತ್ತೇನೆ ಎಂದು ಹೇಳಿ ಮನೆಗೆ ತೆರಳಿದ ರಾಜು ಚೂರಿ ತಂದು ಅಣ್ಣ ಶೇಖರ್ ಅವರ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ. ಗಂಭೀರ ಗಾಯಗೊಂಡ ಶೇಖರ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮಾಂತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group