ಬಂಟ್ವಾಳ: ಶೋರೂಂ ಮುಂದೆ ಪೆಟ್ರೋಲ್ ಸುರಿದು ಬೈಕ್ ಬೆಂಕಿ ಹಚ್ಚಿದ ಮಾಲಕ…!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 08. ಬೈಕ್ ನ ಕಂತಿನ ವಿಚಾರವಾಗಿ ಖಾಸಗಿ ಫೈನಾನ್ಸ್ ಕಂಪನಿಯವರು ಕಿರುಕುಳ ನೀಡಿದರೆಂದು ಸ್ವತಃ ಬೈಕ್ ಮಾಲಕ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಕೈಕಂಬ ಶೋರೂಂ ಬಳಿ ನಡೆದಿದೆ.


ಬೈಕ್ ಮಾಲಕ ಫರಂಗಿಪೇಟೆ ನಿವಾಸಿ ಮಹಮ್ಮದ್ ಹರ್ಷದ್ ಎಂಬಾತ ಬೈಕ್ ಗೆ ಬೆಂಕಿ ಹಚ್ಚಿರುವುದಾಗಿ ತಿಳಿದುಬಂದಿದೆ. ಈತ ಬೈಕ್ ಕೊಳ್ಳಲು ಖಾಸಗಿ ಫೈನಾನ್ಸ್ ನಿಂದ ಸಾಲ ಮಾಡಿದ್ದು, ಬಳಿಕ ಸಾಲ ಪಾವತಿಸದ ಹಿನ್ನೆಲೆ ಫೈನಾನ್ಸ್ ನವರು ಬೈಕ್ ನ ದಾಖಲೆಗಳನ್ನು ಪಡೆದುಕೊಂಡು ಕೂಡಲೇ ಸಾಲದ ಕಂತನ್ನು ಪಾವತಿಸುವಂತೆ ತಿಳಿಸಿದ್ದರು. ಫೈನಾನ್ಸ್ ನವರು ಕಿರಿಕಿರಿ ಮಾಡಿದ ಕಾರಣಕ್ಕೆ ಹರ್ಷದ್ ತನ್ನ ಬೈಕ್ ಜೊತೆ ಶೋರೂಂ ಗೆ ತೆರಳಿ ಕೆಲಹೊತ್ತು ಅಲ್ಲಿ ಮಾತುಕತೆ ನಡೆಸಿದಾಗ ಯಾವುದೇ ಪ್ರಯೋಜನವಾಗದ ಕೋಪದಲ್ಲಿ ಹೊರಗೆ ಬಂದು ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಉಳಿದ ಬೈಕ್ ಗಳಿಗೆ ಬೆಂಕಿ ಹರಡದಂತೆ ನಂದಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸಿ, ಸಿಸಿ ಕ್ಯಾಮರಾ ವಿಡಿಯೋ ತುಣುಕುಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Also Read  ದಂಪತಿಗಳ ಅನ್ಯೋನ್ಯತೆಗಾಗಿ ಉಪಯುಕ್ತಕರ ತಂತ್ರ

error: Content is protected !!
Scroll to Top