ಮಂಗಳೂರು: ಬಾಕಿಯುಳಿದ ಮರಳು ಬ್ಲಾಕ್ ಗಳ ಟೆಂಡರ್ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಲು ಸಚಿವರ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಮರಳಿನ 20 ಬ್ಲಾಕ್‍ಗಳ ಟೆಂಡರ್ ಪ್ರಕ್ರಿಯೆಯನ್ನು ಬರುವ ವಾರದೊಳಗೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಖ್ಯಸ್ಥರನ್ನು ಕರ್ತವ್ಯದಿಂದಲೇ ಬಿಡುಗಡೆಗೊಳಿ, ಕಳುಹಿಸುವಂತೆ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಆಚಾರ್ ಹಾಲಪ್ಪ ಅವರು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.

ಅವರು ಶುಕ್ರವಾರದಂದು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ನಿಯಂತ್ರಣ ವಲಯಕ್ಕೊಳಪಡದ ಪ್ರದೇಶದಲ್ಲಿ ಈ ಹಿಂದೆ 30 ಮರಳು ಬ್ಲಾಕ್‍ಗಳಿಗೆ ಕರೆಯಲಾಗಿದ್ದ ಇ-ಟೆಂಡರ್ ಪ್ರಕ್ರಿಯೆ ನ್ಯಾಯಾಲಯದ ಆದೇಶದಂತೆ ಮುಂದುವರಿಸಲಾಗಿದೆ, ಆದರೆ 20 ಮರಳು ಬ್ಲಾಕ್‍ಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದು ಅಧಿಕಾರಿಗಳ ನಿರಾಸಕ್ತಿ ಕಾರಣವಾಗಿದೆ, ಕೂಡಲೇ ಅವುಗಳಿಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಆ ಇಲಾಖೆಯ ಜಿಲ್ಲಾ ಮಟ್ಟದ ಮುಖ್ಯಸ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸಚಿವರು ತಿಳಿಸಿದರು.

 

ಮರಳಿಗೆ ಸಂಬಂಧಿಸಿದಂತೆ ಇರುವ 7 ಜನ ಸದಸ್ಯರ ಸಮಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಚಿಸಲಾಗಿದೆ, ಸ್ಥಳೀಯ ಶಾಸಕರನ್ನು ಸಮಿತಿಗೆ ಸೇರಿಸಲು ಅವಕಾಶಗಳು ಲಭ್ಯವಿದ್ದಲ್ಲಿ ಅವರನ್ನು ಸೇರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು. ಮರಳು ತೆಗೆಯುವುದು ಹಾಗೂ ಅನಧಿಕೃತ ಮರಳು ಸಾಗಾಟದ ಬಗ್ಗೆ ರಚಿಸಲಾದ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಸೇರಿಸಿಕೊಳ್ಳುವಂತೆ ಶಾಸಕರಾದ ಉಮನಾಥ ಕೋಟ್ಯಾನ್ ಹಾಗೂ ರಾಜೇಶ್ ನಾಯಕ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರು ತಿಳಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಾಜ್ಯದ 30 ಜಿಲ್ಲೆಗಳ ಎಲ್ಲಾ ಕಚೇರಿಗಳಲ್ಲೂ ಕಂಪ್ಯೂಟರ್ ಸಹಿತ ಅಗತ್ಯ ಸೌಲಭ್ಯ ಹಾಗೂ ವಾಹನಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ಕರಾವಳಿ ನಿಯಂತ್ರಣ ವಲಯ ಹಾಗೂ ಕರಾವಳಿ ನಿಯಂತ್ರಣ ರಹಿತ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ನಲ್ವತ್ತು ಕಿಲೋ ಮೀಟರ್‍ಗೂ ಹೆಚ್ಚಿನ ಕರಾವಳಿ ಪ್ರದೇಶವಿದ್ದು, ಅನಧಿಕೃತ ಮರಳು ಸಾಗಾಣಿಕೆಯನ್ನು ನಿಯಂತ್ರಿಸಲು ಹಾಗೂ ಅಧಿಕೃತವಾಗಿ ಮರಳು ಗಣಿಗಾರಿಕೆ ಅವಕಾಶ ನೀಡುವ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ, ಅದೇ ರೀತಿ 7 ಜನರ ತಂಡದ ಸಮಿತಿಯಿಂದ ಕಾಲಕಾಲಕ್ಕೆ ನಿಯಮಿತವಾಗಿ ಸಭೆಯನ್ನು ನಡೆಸಲಾಗುತ್ತಿದೆ, ಕರಾವಳಿ ನಿಯಂತ್ರಣ ವಲಯದಡಿ ಪಾರಂಪಾರಿಕವಾಗಿ ನಡೆದು ಬಂದ ಸಾಂಪ್ರಾದಾಯಿಕ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕನಿಜ ನಿಧಿಯಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಡಾ. ರಾಮ್ ಪ್ರಸಾತ್ ಅವರು ತಿಳಿಸಿದರು. ರಾಜ್ಯದ ವಿವಿದೆಡೆಯಿಂದ ಬರುವ ಅದಿರು ಮಂಗಳೂರಿನ ಬಂದರಿನಿಂದಲೇ ತೆರಳುವ ಕಾರಣ ಟ್ರಕ್‍ಗಳ ನಿರಂತರ ಓಡಾಟದಿಂದ ರಸ್ತೆಗಳು ಹಾನಿಗೀಡಾಗುತ್ತವೆ, ಆ ರಸ್ತೆಗಳನ್ನು ದುರಸ್ತಿ ಪಡಿಸಲು ಜಿಲ್ಲಾ ಖನಿಜ ನಿಧಿಯಿಂದ ಹೆಚ್ಚಿನ ಪಾಲು ನೀಡುವಂತೆ ಶಾಸಕರು ಸಭೆಯ ಗಮನಕ್ಕೆ ತಂದ ಸಂದರ್ಭದಲ್ಲಿ ಡಾ. ರಾಮ್ ಪ್ರಸಾದ್ ಅವರು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಅಕ್ರಮ ಮರಳುಗಾರಿಕೆ ಗಣಿಗಾರಿಕೆಗೆ ಕಡಿವಾಣ ಹಾಕಲಾಗುತ್ತಿದೆ, ನಿಸರ್ಗದ ಉಳಿವು ಹಾಗೂ ಮುಂದಿನ ಪೀಳಿಗೆಗೆ ಸಂಪನ್ಮೂಲಗಳು ದೊರೆಯಬೇಕಾದ ಹಿನ್ನಲೆಯಲ್ಲಿ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಇಲಾಖೆಯ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಹಾಗೂ ಅರ್ಜಿ ಸಲ್ಲಿಕೆ ವಿಧಾನಗಳನ್ನು ಸರಳೀಕರಣಗೊಳಿಸಲಾಗುತ್ತಿದೆ, ಉಳಿದಂತೆ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗುವುದು ಎಂದು ತಿಳಿಸಿದರು. ಆದ್ಯಾಪಾಡಿ ಹಾಗೂ ಶಂಬೂರು ಡ್ಯಾಂಗಳಲ್ಲಿನ ಹೂಳನ್ನು ತೆಗೆಯಲು ಈಗಾಗಲೇ ಕಾರ್ಯಾದೇಶ ನೀಡಲಾಗಿದ ಅದರಂತೆ ತುಂಬೇ ಡ್ಯಾಂನ 15.3 ಮೆಟ್ರಿಕ್ ಟನ್ ಹೂಳು ತೆಗೆಯುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಟೆಂಡರ್ ಕರೆಯಲಾಗಿದೆ ಎಂದು ಖನಿಜಾ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಕಾವೇರಿ ಅವರು ಸಭೆಗೆ ಮಾಹಿತಿ ನೀಡಿದರು.


ನಂತರ ಸಚಿವರು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿ, ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಗಳನ್ನು ನಗರಾಭಿವೃದ್ದಿ ಪ್ರಾಧಿಕಾರದಿಂದ ಶೇ. 50ರ ಮೌಲ್ಯ ಪಾವತಿಸಿ ಖರೀದಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಿದ ಜಮೀನು ಅಂಗನವಾಡಿ ಕೇಂದ್ರಕ್ಕೆ ಸೂಕ್ತವಾಗದಲ್ಲಿ ಶುಲ್ಕ ಕಡಿತ ಮಾಡಲು ಕ್ರಮವಹಿಸಬೇಕು ಎಂದು ಸೂಚಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಪ್ರಭಾರ ಹಾಗೂ ಪ್ರಯಾಣ ಭತ್ಯೆಯನ್ನು ಹೆಚ್ಚಿಸುವುದಕ್ಕೆ ಕ್ರಮವಹಿಸಲಾಗುವುದು, ಮೊಟ್ಟೆ ಖರೀದಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಮೊಟ್ಟೆಯ ದರದಲ್ಲಿ ಏರಿಳತವಿರುವ ಕಾರಣ ಅದನ್ನು ತಾಲೂಕು ಮಟ್ಟದಲ್ಲಿ ಟೆಂಡರ್ ಮಾಡಿ ಅಲ್ಲಿಯೇ ಖರೀದಿಸುವಂತೆ ತಿಳಿಸಿದರು.

ಅಂಗನವಾಡಿ ಕೇಂದ್ರ ಮತ್ತು ಹಾಸ್ಟೆಲ್ ಗಳಿಗೆ ನರೇಗಾದಡಿ ಆವರಣ ಗೋಡೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿದರು. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ವೇದಿಕೆಯಲ್ಲಿದ್ದರು. ಶಾಸಕರಾದ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಡಾ. ಮಂಜುನಾಥ್ ಭಂಡಾರಿ ಮಾತನಾಡಿದರು. ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.

 

error: Content is protected !!

Join the Group

Join WhatsApp Group