ಕರಾವಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಅಭಿವೃದ್ದಿಗಾಗಿ ಕೆಂದ್ರಕ್ಕೆ ಪ್ರಸ್ತಾಪ ➤ ಸಚಿವ ಎಸ್.ಅಂಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಪ್ರತಿ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕರಾವಳಿ ಕರ್ನಾಟಕ ಭಾಗದ ಮೀನುಗಾರರ ಸಮಸ್ಯೆಗಳು, ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ಯತ್ನಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಅವರು ತಿಳಿಸಿದರು.

ಅವರು ಸೋಮವಾರದಂದು ನಗರದ ಸ್ಟೇಟ್ ಬ್ಯಾಂಕ್ ಬಳಿ ನೂತನವಾಗಿ ಆರಂಭಿಸಲಾದ ತಮ್ಮ ಕಚೇರಿಯನ್ನು ಉದ್ಘಾಟಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ತಲಪಾಡಿಯಿಂದ ಕಾರವಾರದವರೆಗಿನ ರಾಜ್ಯದ ಕರಾವಳಿ ಭಾಗದ ಮೀನುಗಾರ ಬಂಧುಗಳ ಸಮಸ್ಯೆಗಳನ್ನು ನೂತನವಾಗಿ ಆರಂಭಿಸಲಾದ ಕಚೇರಿಯಲ್ಲಿ ಆಲಿಸಿ ಅವುಗಳಿಗೆ ಪರಿಹಾರ ಕಲ್ಪಿಸುವ ಯತ್ನ ಮಾಡಲಾಗುವುದು, ಅದರಂತೆ ಉಡುಪಿ ಹಾಗೂ ಕಾರವಾರಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಪರಿಹರಿಸಲಾಗುವುದು ಎಂದು ಮಾಹಿತಿ ನೀಡಿದರು.

Also Read  ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಸಚಿವ ಡಾ.ಜಿ.ಪರಮೇಶ್ವರ್

ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ 28 ಹಾಗೂ ಬಂದರು ಇಲಾಖೆಗೆ ಸಂಬಂಧಿಸಿದ 98 ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತಿದೆ, ವಿಶೇಷವಾದ ಈ ಯೋಜನೆಗಳಿಂದ ಕರಾವಳಿ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿಗೆ ಬದ್ಧವಾಗಿವೆ, ಸಾರ್ವಜನಿಕರು ಕೂಡಾ ಅದಕ್ಕೆ ಅಗತ್ಯ ಸಹಕಾರ ನೀಡಬೇಕು. ಜನರ ಅಪೇಕ್ಷೆ ಹಾಗೂ ಕಾಳಜಿಗೆ ಸರ್ಕಾರ ಸ್ಪಂದಿಸಲು ಸದಾ ಸಿದ್ಧವಿದೆ ಎಂದು ಹೇಳಿದರು.‌ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಅನುಕೂಲವಾಗುವಂತೆ ಈ ಕಚೇರಿಯನ್ನು ಆರಂಭಿಸಲಾಗಿದೆ, ಇದು ಬ್ರಿಟಿಷರ ಕಾಲದ ಬಂಗಲೆಯಾಗಿದ್ದು ಶಿಥಿಲಗೊಂಡಿತ್ತು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದನ್ನು ನವೀಕರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್ ಸೇರಿದಂತೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Also Read  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ➤ 6 ತಿಂಗಳ ತರಬೇತಿ ಕಾರ್ಯಗಾರ

error: Content is protected !!
Scroll to Top