ಮಂಗಳೂರು: ಶಕ್ತಿ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಸಾಮೂಹಿಕ ಸೂರ್ಯ ನಮಸ್ಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಶಕ್ತಿನಗರದ ಶಕ್ತಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಸರ್ಕಾರದ ಆದೇಶದ ಪ್ರಕಾರ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಆಯೋಜಿಸಲಾಯಿತು.


ಕಾರ್ಯಕ್ರಮವನ್ನು ಉದ್ದೇಶಿಸಿ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ, ಸೂರ್ಯ ನಮಸ್ಕಾರವು ಯೋಗದ ಒಂದು ಅಂಗ. ಭಾರತವು ಯೋಗವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಜಗತ್ತು ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ಸೂರ್ಯ ನಮಸ್ಕಾರದಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಲಾಭಗಳಿವೆ. ಇದನ್ನು ಪ್ರತಿದಿನ ಮುಂಜಾನೆ ಪ್ರತಿಯೊಬ್ಬರು ಅಭ್ಯಸಿಸಬೇಕೆಂದು ಹೇಳಿದರು. ನಮ್ಮ ದೇಹದ ಸ್ನಾಯುಗಳಿಗೆ ವಿಶೇಷ ಶಕ್ತಿಯನ್ನು ಸೂರ್ಯನಮಸ್ಕಾರ ನೀಡುತ್ತದೆ. ಶಾರೀರಿಕ, ಮಾನಸಿಕ ಮತ್ತು ಭೌದ್ಧಿಕ ಶಕ್ತಿಯನ್ನು ಯೋಗ ನೀಡುವುದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಲು ಇದು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಯೋಗವು ಮುಂದಿನ ದಿನಗಳಲ್ಲಿ ಪಠ್ಯಕ್ರಮವಾಗಿ ಬರಬೇಕೆಂದು ಹೇಳಿದರು.

ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಟಿ.ರಾಜರಾಮ್ ರಾವ್ ಮಾತನಾಡಿ ಕೇಂದ್ರ ಸರ್ಕಾರವು ಯೋಗಕ್ಕೆ ದೊಡ್ಡ ಸ್ಥಾನಮಾನವನ್ನು ನೀಡುತ್ತಿದೆ. ಆದ್ದರಿಂದ ಪಪೂ ಶಿಕ್ಷಣ ಇಲಾಖೆ ಸೂರ್ಯ ನಮಸ್ಕಾರವನ್ನು ಪ್ರತಿ ಕಾಲೇಜಿನಲ್ಲಿ ನಡೆಸುವಂತೆ ಸೂಚಿಸಿರುವುದರಿಂದ ಇದನ್ನು ನಾವು ದಿನನಿತ್ಯ ಮಾಡುವುದರ ಮೂಲಕ ನಮ್ಮ ಆರೋಗ್ಯದ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಯೋಗ ಶಿಕ್ಷಕಿ ಶ್ರೀಮತಿ ಸುರೇಖಾ ಇವರು ಸೂರ್ಯ ನಮಸ್ಕಾರವನ್ನು ನಡೆಸಿಕೊಟ್ಟರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಭಾಗವಹಿಸಿದರು.

error: Content is protected !!

Join the Group

Join WhatsApp Group