ಮುಂಬೈನಲ್ಲಿ ಗ್ಯಾಂಗ್ ಸ್ಟರ್ ಆಗಿದ್ದ ಕರಾವಳಿಯ ಸುರೇಶ್ ಪೂಜಾರಿ..! ➤ ಫಿಲಿಪೈನ್ಸ್ ನಿಂದ ಭಾರತಕ್ಕೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 15. ಮುಂಬೈನಲ್ಲಿ ಗ್ಯಾಂಗ್ ಸ್ಟರ್ ಆಗಿದ್ದ ಕರಾವಳಿ ಮೂಲದ ಸುರೇಶ್ ಪೂಜಾರಿಯವರನ್ನು ಫಿಲಿಪೈನ್ಸ್ ದೇಶದಿಂದ ಭಾರತಕ್ಕೆ ಕರೆತರಲಾಗಿದ್ದು, ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಐಬಿ ಮತ್ತು ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

ಅಂಡರ್‌ವರ್ಲ್ಡ್ ಡಾನ್ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿದ್ದ ಈತ ಬಳಿಕ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಬಾರ್ ಮಾಲೀಕರು ಹಾಗೂ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದು, ಮುಂಬೈ ಬಳಿಯ ಥಾಣೆ, ಕಲ್ಯಾಣ್, ಉಲ್ಲಾಸನಗರ ಹಾಗೂ ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಬಾಗಿಯಾಗಿದ್ದ. ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್ ನಿಂದ ದೆಹಲಿಗೆ ಕರೆತಂದು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು, ಬಳಿಕ ಮುಂಬೈ ಪೊಲೀಸರಿಗೆ ಕಸ್ಟಡಿಗೆ ಒಪ್ಪಿಸುವ ಸಾಧ್ಯತೆ ಇದೆ.

ಬಾಲಕನಾಗಿದ್ದಾಗಲೇ ಹೋಟೆಲ್ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದ ಸುರೇಶ್, ಕೆಲ ವರ್ಷಗಳ ಬಳಿಕ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಈ ಸಂದರ್ಭ ರವಿ ಪೂಜಾರಿ ಹಾಗೂ ಛೋಟಾ ರಾಜನ್ ಜತೆಗೂ ಗುರುತಿಸಿಕೊಂಡಿದ್ದ. ಒಂದು ದಶಕದ ಹಿಂದೆ, ತನ್ನದೇ ಆದ ಗ್ಯಾಂಗ್ ರಚಿಸಿ ಭೂಗತ ಲೋಕದ ಚಟುವಟಿಕೆಯಲ್ಲಿ ತೊಡಗಿದ್ದಲ್ಲದೇ, 2007ರಲ್ಲಿ ಮುಂಬೈ ಬಿಟ್ಟು ವಿದೇಶಕ್ಕೆ ತೆರಳಿದ್ದ ಸುರೇಶ್ ಅಲ್ಲಿಂದಲೇ ತನ್ನ ಸಹಚರರ ಮೂಲಕ ಕೆಲಸ ಮಾಡಿಸುತ್ತಿದ್ದ. ಈ ನಡುವೆ 2019 ರಲ್ಲಿ ಗ್ಯಾಂಗ್ ಸ್ಟಾರ್ ರವಿ ಪೂಜಾರಿಯನ್ನು ಸೆನೆಗಲ್‌ನಲ್ಲಿ ಪತ್ತೆ ಹಚ್ಚಿ ಭಾರತಕ್ಕೆ ಕರೆತರಲಾಗಿತ್ತು. ಈತನ ಮೂಲ ಉಡುಪಿ ಜಿಲ್ಲೆಯ ಮಲ್ಪೆಯಾಗಿದ್ದು, ಕರಾವಳಿಯನ್ನು ಬಾಲ್ಯದಲ್ಲೇ ತೊರೆದಿದ್ದ ಈತನ ವಿರುದ್ದ ಕರಾವಳಿಯಲ್ಲಿ ಯಾವುದೇ ಅಪರಾಧ ಕೃತ್ಯವೆಸಗಿರುವ ಮಾಹಿತಿ ಇಲ್ಲ.

error: Content is protected !!

Join the Group

Join WhatsApp Group