ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ➤ ಪೂಂಜಾಲಕಟ್ಟೆ ಹೆಡ್ ಕಾನ್ಸ್‌ಟೇಬಲ್ ಮೃತ್ಯು

(ನ್ಯೂಸ್ ಕಡಬ) Newskadaba.com ಬಂಟ್ವಾಳ, ಅ. 16. ಬೈಕ್ ಹಾಗೂ ಜುಪಿಟರ್ ನಡುವೆ ಅಪಘಾತ ಸಂಭವಿಸಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆಯಲ್ಲಿ ನಡೆದಿದೆ.

ಮೃತರನ್ನು ಪೂಂಜಾಲಕಟ್ಟೆ ಹೆಡ್ ಕಾನ್ಸ್‌ಟೇಬಲ್ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಇನ್ನೊಂದು ವಾಹನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಅವರಿಗೆ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರದಂದು ವಾಮದಪದವಿನಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳ ಜೊತೆ ಭಾಗವಹಿಸಿ, ಹಿಂದಿರುಗುತ್ತಿದ್ದ ವೇಳೆ ನೇರಳಕಟ್ಟೆ ಎಂಬಲ್ಲಿ ವಿರುದ್ದ ದಿಕ್ಕಿನಿಂದ ಬಂದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ತಕ್ಷಣವೇ ಹಿಂದಿನಿಂದ ಬರುತ್ತಿದ್ದ ಠಾಣೆಯ ಇಲಾಖಾ ಜೀಪಿನಲ್ಲಿದ್ದ ಸಿಬ್ಬಂದಿಗಳು ಅಬೂಬಕ್ಕರ್ ಅವರನ್ನು ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರಾದರೂ ಅಲ್ಲಿ ವೈದ್ಯರಾಗಲೀ, ಸಿಬ್ಬಂದಿಗಳಾಗಲೀ ಇಲ್ಲದೆ ಕೇಂದ್ರಕ್ಕೆ ಬೀಗ ಹಾಕಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಗಳು ಮತ್ತೆ ಅಲ್ಲಿಂದ ಬಂಟ್ವಾಳ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರ ಗಾಯಗೊಂಡ ಎಚ್ ಸಿ ಅಬೂಬಕ್ಕರ್ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಮೂರು ಮಂದಿ ಸಹೋದರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

error: Content is protected !!
Scroll to Top