ಆಲಂಕಾರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 163ನೇ ಗುರುಜಯಂತಿ ► ಸಾಧಕರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಅ.31. ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 163ನೇ ಗುರುಜಯಂತಿಯ ಸಮಾರಂಭವು ಆಲಂಕಾರು ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಕೆಡೆಂಜಿಯವರು ಮಾತನಾಡಿ ಮನುಷ್ಯ ಪರೋಪಕಾರಿ ಜೀವನ ತೊರೆದು ಸ್ವಾರ್ಥ ಜೀವನ ನಡೆಸುವುತ್ತಿರುವುದರಿಂದ ಸಮಾಜದಲ್ಲಿ ಆಶಾಂತಿ ಉಂಟಾಗುತ್ತಿದೆ. ಎಲ್ಲಾ ಒಳಿತು ಕೆಲಸ ಕಾರ್ಯಗಳು ಮೊದಲು ತಮ್ಮ ಮನೆಯಿಂದ ಪ್ರಾರಂಭವಾದಾಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ. ತನ್ನ ಮನೆಯನ್ನು ಸರಿ ಮಾಡಲಾಗದೆ ಸಮಾಜ ಸುಧಾರಣೆಗೆಂದು ಹೊರಟವರು ಎಂದೂ ಸಮಾಜಕ್ಕೆ ಮಾರಕವಾಗುತ್ತಾರೆ ಹೊರತು ಪೂರಕವಾಗುವುದಿಲ್ಲ. ಮನೆಯಲ್ಲಿನ ವ್ಯವಸ್ಥೆಯನ್ನು ಸರಿಮಾಡಿ ಬಳಿಕ ಸಮಾಜ ಸುಧಾರಣೆ ಮಾಡುವವ ನಾಯಕನಾಗಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಆಧಾರದಲ್ಲಿ ನಾಯಕತ್ವದ ಗುಣ ಅಡಗಿದೆ. ಇದಕ್ಕಾಗಿ ಇಚ್ಚಾಶಕ್ತಿಯ ಜೊತೆಗೆ ವಿಶಾಲ ಮನೋದೃಷ್ಠಿ, ವಿಚಾರವನ್ನು ಗ್ರಹಿಸುವ ಶಕ್ತಿ, ತಾಳ್ಮೆ, ಆತ್ಮಸ್ಥೈರ್ಯ ಅತ್ಯಗತ್ಯ. ಸ್ವಾರ್ಥ ಬಿಟ್ಟು ಸಮಾಜದ ಒಳಿತಿನ ಬಗ್ಗೆ ಕಾಳಜಿವಹಿಸಿ. ಮತ್ತೊಬ್ಬರಿಗೆ ಸಮಸ್ಯೆಯಾಗದರಿರುವುದೇ ಸ್ವತಂತ್ರದ ಬದುಕು ಎಂದು ಗುರು ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ, ಪುತ್ತೂರು ತಾಲೂಕಿನಲ್ಲಿಯೇ ಆಲಂಕಾರು ಬಿಲ್ಲವ ಸಂಘವು ಸಂಘಟನೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಇದಕ್ಕಾಗಿ ಆಲಂಕಾರು ಗ್ರಾಮದಲ್ಲಿ ಗುರು ಮಂದಿರ ನಿರ್ಮಾಣದ ಪ್ರಕ್ರಿಯೆಯು ಶೀಘ್ರದಲ್ಲಿಯೇ ಪ್ರಾರಂಭವಾಗಬೇಕು. ಗುರುಗಳ ತತ್ವಸಿದ್ದಾಂತಗಳಿಗೆ ತಕ್ಕ ಬೆಲೆ ಸಿಗಬೇಕಾದರೆ ಪುತ್ತೂರು ತಾಲೂಕಿನ 52 ಗ್ರಾಮಗಳಲ್ಲಿಯು ಗುರುಮಂದಿರ ನಿರ್ಮಾಣವಾಗಬೇಕು. ಈ ಉದ್ದೇಶವನ್ನಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಾವೆಲ್ಲರು ಕಾರ್ಯ ಪ್ರವೃತ್ತರಾಗಬೇಕು  ಎಂದರು.


ಕಾರ್ಯಕ್ರಮ ಉದ್ಟಾಟಿಸಿದ ಪುರೋಹಿತ ಲೋಕೇಶ ಶಾಂತಿ ಮಾತನಾಡಿ, ಬ್ರಹ್ಮಶ್ರೀಗಳು ಎಲರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ. ಧರ್ಮನಿಷ್ಠೆ, ಸಂಸ್ಕಾರ ಸಂಸ್ಕೃತಿಯ ಆಧಾರದಲ್ಲಿ ಜೀವನ ನಡೆಸಿದಾಗ ಮಾತ್ರ ಪರಿಪೂರ್ಣ ಜೀವನಕ್ಕೆ ಅರ್ಥ ಬಂದಂತಾಗುತ್ತದೆ ಎಂದರು.
ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷರಾದ ದಯಾನಂದ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಆಲಂಕಾರು ಗ್ರಾಮದ ನೆಕ್ಕಿಲಾಡಿ ಸೇಸಪ್ಪ ಪೂಜಾರಿ ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ಸ್ವಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಬಳಿಕ ಸಂಘದ ವತಿಯಿಂದ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರುಗಳಿಗೆ ಬಹುಮಾನಗಳನ್ನು ನೀಡಿಲಾಯಿತು. ತಾ.ಪಂ ಸದಸ್ಯೆ ತಾರಾತಿಮ್ಮಪ್ಪ, ಕೋಟಿ-ಚೆನ್ನಯ ಮಿತ್ರ ವೃಂದದ ಅಧ್ಯಕ್ಷರಾದ ದಿನೇಶ್ ಕೇಪುಳು, ಬಿಲ್ಲವ ಸಂಘದ ಸಂಚಾಲಕ ಸದಾನಂದ ಕುಮಾರ್, ಕೊೖಲ-ರಾಮಕುಂಜ ಗ್ರಾಮ ಸಮಿತಿಯ ಅಧ್ಯಕ್ಷ ಅಶೋಕ ಪೂಜಾರಿ ಉಪಸ್ಥಿತರಿದ್ದರು. ಪೆರಾಬೆ-ಕುಂತೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಉದಯ.ಎಸ್.ಸಾಲ್ಯಾನ್ ಸ್ವಾಗತಿಸಿದರು. ಹಳೆನೇರಂಕಿ ಗ್ರಾಮ ಸಮಿತಿ ಅಧ್ಯಕ್ಷ ಅನಿಲ್ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಭಜನೆ ನಡೆದು ಗುರುಪೂಜೆ ನಡೆಯಿತು. ಬಳಿಕ ಪ್ರತೀಮ ನೇತೃತ್ವದಲ್ಲಿ ತಾಂಡವ ನೃತ್ಯಾಯ ಹಳೆನೇರಂಕಿ ತಂಡದಿಂದ ನೃತ್ಯವೈಭವ ಕಾರ್ಯಕ್ರಮವು ನಡೆಯಿತು.

error: Content is protected !!

Join the Group

Join WhatsApp Group