ಸೆಲೆಬ್ರಿಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಉಪಯೋಗಿಸಿದ ಆರೋಪ ➤ ಕಡಬದ ಯುವಕನಿಗೆ ಪಶ್ಚಿಮ ಬಂಗಾಳ ನ್ಯಾಯಾಲಯದಿಂದ ಜಾಮೀನು



(ನ್ಯೂಸ್ ಕಡಬ) newskadaba.com ಕಡಬ, ಸೆ.07. ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಸೆಲೆಬ್ರಿಟಿಯೋರ್ವಳ ಫೋಟೋ ಅಪ್‌ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಕೋಲ್ಕತ್ತಾ ಪೊಲೀಸರಿಂದ ಬಂಧಿತರಾಗಿದ್ದ ಕಡಬದ ಯುವಕನಿಗೆ ಅಲ್ಲಿನ ನ್ಯಾಯಾಲಯ ಬುಧವಾರದಂದು ಜಾಮೀನು ನೀಡಿದೆ.





ಪಶ್ಚಿಮ ಬಂಗಾಳದ ಸೆಲೆಬ್ರಿಟಿ ಸುಲಘ್ನ ರಾಯ್ ಚೌಧುರಿ ಎಂಬಾಕೆಯ ಫೋಟೋವನ್ನು ಕಡಬದ ನೂಜಿಬಾಳ್ತಿಲ ನಿವಾಸಿ ಸಂಜಯ್ ಕೃಷ್ಣ ಅವರು ಸಾಮಾಜಿಕ ಜಾಲತಾಣದ ಖಾತೆಯೊಂದಕ್ಕೆ ಅಪ್ ಲೋಡ್ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಈ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪಶ್ಚಿಮ ಬಂಗಾಳದ ಉತ್ತರ 24 ಪಾರ್‌ಗಾನ ನ್ಯಾಯಾಲಯವು ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ
ಮೊಬೈಲ್ ಲೋಕೇಷನ್ ನ ಜಾಡು ಹಿಡಿದು ಕಡಬಕ್ಕೆ ಆಗಮಿಸಿದ ಪಶ್ಚಿಮ ಬಂಗಾಳ ಪೊಲೀಸರು ಸಂಜಯ್ ಕೃಷ್ಣನನ್ನು ಕಡಬದಲ್ಲಿ ಬಂಧಿಸಿ ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಜಾಮೀನು ನಿರಾಕರಿಸಿದ್ದರಿಂದ ಸಂಜಯ್ ಕೃಷ್ಣ ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ.






 

 

 

error: Content is protected !!
Scroll to Top