ಕಡಬ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ➤ ಶಾಂತಿ, ಸಾಮರಸ್ಯಕ್ಕಾಗಿ ಶ್ರಮಿಸೋಣ: ತಹಶೀಲ್ದಾರ್ ಅನಂತಶಂಕರ ಬಿ.

(ನ್ಯೂಸ್ ಕಡಬ) newskadaba.com ಕಡಬ, ಆ.15.ನಮ್ಮ ಹಿರಿಯರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಕೈಜೋಡಿಸೋಣ ಎಂದು ಕಡಬ ತಹಶೀಲ್ದಾರ್ ಅನಂತಶಂಕರ ಬಿ. ಅವರು ನುಡಿದರು.

ಅವರು ಕಡಬ ತಾಲೂಕು ಆಡಳಿತದ ನೇತೃತ್ವದಲ್ಲಿ ರವಿವಾರ ಜರಗಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸುವಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ಶ್ರಮಿಸಬೇಕು. ನಾಡಿನ ಗೌರವವನ್ನು ಎತ್ತಿಹಿಡಿಯುವ ಕೆಲಸ ನಮ್ಮಿಂದಾಗಬೇಕು ಎಂದು ಅವರು ಹೇಳಿದರು. ಬಳಿಕ ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ದೇಶವು ಅನಕ್ಷರತೆಯಿಂದ ಕೂಡಿತ್ತು. ಆದರೆ ದೇಶ ಭಕ್ತಿ, ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಾಮರಸ್ಯಕ್ಕೆ ಯಾವುದೇ ಕೊರತೆ ಇರಲಿಲ್ಲ. ಇಂದು ಇಡೀ ದೇಶದ ಜನರು ಅಕ್ಷರಸ್ಥರಾಗಿದ್ದಾರೆ, ಉನ್ನತ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ. ಆದರೆ ದೇಶ ಭಕ್ತಿ, ಸಂಸ್ಕಾರ, ನೈತಿಕತೆ ಮಾಯವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ನಾವು ತಿನ್ನುವ ಆಹಾರ ವಿಷಮಯವಾಗಿದೆ. ಈ ಎಲ್ಲಾ ವಿಚಾರಗಳನ್ನು ಅರಿತುಕೊಂಡು ದೇಶವನ್ನು ಮತ್ತೆ ಗತ ವೈಭವದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಕೃಷ್ಣ ಶೆಟ್ಟಿ ಕಡಬ, ಸಯ್ಯದ್ ಮೀರಾ ಸಾಹೇಬ್, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಮಾತನಾಡಿದರು. ಕಡಬ ಎಸ್‍ಐ ರುಕ್ಮ ನಾಯ್ಕ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಉಪ ತಹಶಿಲ್ದಾರ್ ಕೆ.ಟಿ.ಮನೋಹರ್ ಉಪಸ್ಥಿತರಿದ್ದರು.


ಸಮ್ಮಾನ: ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಬ್ರಹ್ಮಣ್ಯದ ಅನನ್ಯ ಎಂ.ಡಿ., ವಿನೆಸ್ಸಾ ಶಾರಿನ ಡಿ’ಸೋಜ, ನೆಲ್ಯಾಡಿಯ ಶ್ರೀಶ ಶರ್ಮ ಕೆ., ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಕಡಬ ಉಪ ತಹಶೀಲ್ದಾರ್ ಮನೋಹರ ಕೆ.ಟಿ., ಸುಬ್ರಹ್ಮಣ್ಯ ಗ್ರಾಮಕರಣಿಕ ರಂಜನ್ ಕಲ್ಕುದಿ, ಕೋಡಿಂಬಾಳ ಗ್ರಾಮ ಸಹಾಯಕ ವಿಜಯ ಕುಮಾರ್, ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಚಂದ್ರಶೇಖರ್, ಕಿರಿಯ ಆರೋಗ್ಯ ಸಹಾಯಕಿ ಲೀನಾ, ಕೊಯಿಲ ಪ್ರಾಥಮಿಕ ಆರೋಗ್ಯ ಆಶಾ ಕಾರ್ಯಕರ್ತೆ ಮಂಜುಳಾ, ಪಾಲ್ತಾಡಿ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಂತ್ರಜ್ಞೆ ಭಾರತಿ, ನೂಜಿಬಾಳ್ತಿಲ ಪಿಡಿಒ ಆನಂದ ಗೌಡ, ಕೊಂಬಾರು ಪಿಡಿಒ ರಾಘವೇಂದ್ರ ಗೌಡ, ಕಡಬ ಚರ್ಚ್ ಅಂಗನವಾಡಿ ಕಾರ್ಯಕರ್ತೆ ನಳಿನಿ ರೈ, ಪುಳಿಕುಕ್ಕು ಅಂಗನವಾಡಿ ಕಾರ್ಯಕರ್ತೆ ಸವಿತಾ, ಕಡಬ ಎಸ್‍ಐ ರುಕ್ಮ ನಾಯ್ಕ, ಎಎಸ್‍ಐ ಚಂದ್ರಶೇಖರ್ ಎನ್., ಕೊಂಡಾಡಿ ಕೊಪ್ಪ ಸರಕಾರಿ ಶಾಲಾ ಶಿಕ್ಷಕ ಜಯಂತ್ ವೈ., ಕಡಬ ಸರಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ಸಿ., ಕಡಬ ಪಟ್ಟಣ ಪಂಚಾಯತ್ ಪೌರ ಕಾರ್ಮಿಕ ಪೂವಪ್ಪ ಪಾಜೋವು ಅವರನ್ನು ಸಮ್ಮಾನಿಸಲಾಯಿತು.


ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಸ್ವಾಗತಿಸಿ, ಕಡಬ ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ವಂದಿಸಿದರು. ಶಿಕ್ಷಕ ಆನಂದ ಆಪ್ಟೆ ನಿರೂಪಿಸಿದರು.

 

 

 

error: Content is protected !!

Join the Group

Join WhatsApp Group