ರಿಕ್ಷಾ ಕಳವು ಮಾಡಿ ಸ್ನೇಹಿತನಿಗೆ ಕೊಟ್ಟ ಕಡಬದ ವ್ಯಕ್ತಿ ➤ ಕೊರಗಜ್ಜನ ಮೊರೆಯಿಂದ ರಿಕ್ಷಾ ಪತ್ತೆ

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಜೂ.22. ಮನೆಯಂಗಳದ ಶೆಡ್ ನಲ್ಲಿರಿಸಲಾಗಿದ್ದ ಅಟೋ ರಿಕ್ಷಾವೊಂದನ್ನು ಕಳ್ಳರು ಕದ್ದೊಯ್ದ ಪ್ರಕರಣದಲ್ಲಿ ಕಳವಾದ ಅಟೋ ರಿಕ್ಷಾವು ಉಪ್ಪಿನಂಗಡಿಯಲ್ಲೇ ಮಂಗಳವಾರದಂದು ಪತ್ತೆಯಾಗಿದೆ.

ಇಲ್ಲಿನ ನಟ್ಟಿಬೈಲು ನಿವಾಸಿ ನವೀನ್ ಎಂಬವರು ಚಲಾಯಿಸುತ್ತಿದ್ದ ಅಟೋ ರಿಕ್ಷಾವನ್ನು ಕಳೆದ ಶುಕ್ರವಾರದಂದು ಅವರ ಮನೆಯಂಗಳದ ಶೆಡ್‌ನಲ್ಲಿ ರಾತ್ರಿ ವೇಳೆ ನಿಲ್ಲಿಸಲಾಗಿದ್ದು, ಶನಿವಾರ ಮುಂಜಾನೆ ರಿಕ್ಷಾ ಕಳವಾಗಿರುವುದು ಅರಿವಿಗೆ ಬಂದಿತ್ತು.  ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ತನ್ನ ಜೀವನಧಾರವಾಗಿದ್ದ ಅಟೋ ರಿಕ್ಷಾ ಕಳವಿಗೀಡಾಗಿ ಕಂಗಾಲಾಗಿದ್ದ ನವೀನ್ ಈ ಬಗ್ಗೆ ಕೊರಗಜ್ಜ ದೈವಕ್ಕೆ ಮೊರೆ ಹೋಗಿದ್ದು, ಅವರ ಪ್ರಾರ್ಥನೆಯ ಫಲವೇನೋ ಎಂಬಂತೆ ಕಳವಿಗೀಡಾದ ಅಟೋ ರಿಕ್ಷಾವು ಮಂಗಳವಾರದಂದು ಉಪ್ಪಿನಂಗಡಿ ಪರಿಸರದಲ್ಲಿ ಸಂಚರಿಸುತ್ತಿದ್ದಾಗ ಅಟೋ ಚಾಲಕರು ಅದನ್ನು ಗುರುತಿಸಿ ಅಡ್ಡಗಟ್ಟಿ ಪೊಲೀಸರಿಗೊಪ್ಪಿಸಿದ್ದಾರೆ. ಸದ್ರಿ ಅಟೋ ರಿಕ್ಷಾವನ್ನು ಚಲಾಯಿಸುತ್ತಿದ್ದ ವ್ಯಕ್ತಿಗೆ ಕಡಬ ತಾಲೂಕಿನ ಬಿಳಿನೆಲೆಯ ಸ್ನೇಹಿತನೋರ್ವ ಇದನ್ನು ನೀಡಿರುವುದೆಂದೂ, ತಾನು ತನ್ನ ಕುಟುಂಬಸ್ಥರನ್ನು ಔಷಧಕ್ಕೆಂದು ಉಪ್ಪಿನಂಗಡಿಗೆ  ಕರೆತರುತ್ತಿದ್ದಾಗ  ಉಳಿದ ಅಟೋ ರಿಕ್ಷಾದವರು ಉಪ್ಪಿನಂಗಡಿ ಪರಿಸರದಲ್ಲಿ ಅಡ್ಡಗಟ್ಟಿದ್ದಾರೆಂದೂ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಿಳಿನೆಲೆಯ ವ್ಯಕ್ತಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

 

 

 

 

error: Content is protected !!

Join the Group

Join WhatsApp Group