ಜಿಲ್ಲಾಡಳಿತದ ನಿಲುವಿಗೆ ಸೆಡ್ಡು ಹೊಡೆದ ಉಪ್ಪಿನಂಗಡಿಯ ವ್ಯಾಪಾರಸ್ಥರು ➤ ಪುಟ್ಪಾತ್ ನಲ್ಲಿ ವಸ್ತುಗಳನ್ನಿರಿಸಿ ಮಾರಾಟ

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಜೂ.22. ಲಾಕ್‌ಡೌನ್ ನಿಯಮಾವಳಿಯ ಗೊಂದಲದ ನಡುವೆ ಮಂಗಳವಾರದಂದು ಉಪ್ಪಿನಂಗಡಿ ಪರಿಸರದಲ್ಲಿ ಬಿರುಸಿನ ವ್ಯಾಪಾರ ವಹಿವಾಟು ನಡೆದವು.

ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ ಜಿಲ್ಲಾಡಳಿತದ ನಿಲುವಿನಂತೆ ಹಲವು ದಿನಗಳ ಕಾಲ ಅಂಗಡಿಯಲ್ಲಿ ವ್ಯಾಪಾರ ನಡೆಸಲಾಗದೇ ಜೀನವದಲ್ಲಿ ಸಂಕಷ್ಟ ಎದುರಿಸಿದ್ದ ಬಹುತೇಕ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿ ಮುಂಭಾಗದ ಪುಟ್ ಪಾತ್‌ನಲ್ಲಿ ವಸ್ತುಗಳನ್ನಿರಿಸಿ  ಮಾರಾಟ ಮಾಡುವ ಮೂಲಕ ತಮ್ಮನ್ನು ತಾವು ಪುಟ್‌ಪಾತ್ ವ್ಯಾಪಾರಿಗಳೆಂದು ಘೋಷಿಸಿಕೊಂಡರು.

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ದ.ಕ ಜಿಲ್ಲೆಯಲ್ಲೂ ಅನ್ ಲಾಕ್ ಘೋಷಿಸಿ ಮಧ್ಯಾಹ್ನದ ವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿರುವುದನ್ನು ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ಸ್ವಾಗತಿಸಿ, ಕೊರೋನಾ ನಿಯಂತ್ರಣಕ್ಕೆ ಸರಕಾರದ ಪ್ರಯತ್ನ ಶ್ಲಾಘನೀಯ. ಆದರೆ ಒಂದಷ್ಟು ಮಂದಿಗೆ ವ್ಯಾಪಾರ ನಡೆಸಲು ಅವಕಾಶ, ಮತ್ತೊಂದಷ್ಟು ಮಂದಿಗೆ ವ್ಯಾಪಾರ ನಡೆಸಲು  ಅವಕಾಶ ನಿರಾಕರಣೆ ಬೇಸರ ತಂದಿತ್ತು. ಇದೀಗ ಎಲ್ಲರಿಗೂ ಮಧ್ಯಾಹ್ನದ ವರೆಗೆ ವ್ಯಾಪಾರ ನಡೆಸಲು ಅವಕಾಶ ಒದಗಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.

ಭ್ರಷ್ಟರಿಗೆ ತಲೆನೋವು: ಮಧ್ಯಾಹ್ನ ತನಕ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದು, ಕೆಲವು ಭ್ರಷ್ಟ ಅಧಿಕಾರಿಗಳಿಗೆ ತಲೆನೋವು ತಂದೊಡ್ಡುವಂತಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಈಗ ಕೇಳಿ ಬರುತ್ತಿದೆ.  ದಿನಕ್ಕೆ ಇಂತಿಷ್ಟು ಮಾಮೂಲಿ ನೀಡುವ ಇಲ್ಲಿನ ಕೆಲವು ಸೀಮಿತ ಜವುಳಿ ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಕೆಲವು ಭ್ರಷ್ಟ ಅಧಿಕಾರಿಗಳು ವ್ಯಾಪಾರಕ್ಕೆ ಅವಕಾಶ ನೀಡಿದ್ದರು. ಅವರು ಒಳಗೆ ಗ್ರಾಹಕರನ್ನು ಕೂಡಿ ಹಾಕಿ, ಎದುರಿನ ಷಟರ್ ಎಳೆದು ವ್ಯಾಪಾರ ನಡೆಸುತ್ತಿದ್ದರು. ಆದರೆ ಇಲ್ಲಿನ ಕೆಲವು ಭ್ರಷ್ಟ ಅಧಿಕಾರಿಗಳು ಮಾತ್ರ ಇದನ್ನು ಕಂಡು ಕಾಣದಂತೆ ಮೌನವಾಗಿದ್ದರು. ಆದರೆ ಸರಕಾರದ ಈಗಿನ ಆದೇಶ ವರ್ತಕ ವಲಯದಲ್ಲಿ ಸಂತಸ ತಂದರೆ, ಭ್ರಷ್ಟ ಅಧಿಕಾರಿಗಳ ಕಿಸೆ ತುಂಬದೇ ಅವರಿಗೆ ತಲೆನೋವು ಕೊಡುವಂತಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

 

 

 

error: Content is protected !!

Join the Group

Join WhatsApp Group