ರೆಮಿಡಿಸಿವಿರ್ ಅಕ್ರಮವಾಗಿ ಮಾರಾಟ- ಎಬಿವಿಪಿ ಪ್ರಮುಖನ ಬಂಧನ ➤ ಸಮಗ್ರ ತನಿಖೆಗೆ ಕ್ಯಾಂಪಸ್ ಫ್ರಂಟ್ ಆಗ್ರಹ

(ನ್ಯೂಸ್ ಕಡಬ) Newskadaba.com ಬಳ್ಳಾರಿ, ಮೇ. 16. ಕೊರೋನಾ ಸಂಕಷ್ಟದಲ್ಲಿ ಔಷಧಿಗಳ ಕೊರತೆಯಿಂದ ಸೋಂಕಿತರು ಪರದಾಡುತ್ತಿರುವ ಸಂದರ್ಭದಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬಳ್ಳಾರಿಯಿಂದ ವರದಿಯಾಗಿದೆ. ರೆಮಿಡಿಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದಡಿಯಲ್ಲಿ ಬಳ್ಳಾರಿ ನಗರದ ಎ.ಬಿ.ವಿ.ಪಿ ಸಂಘಟನೆಯ ಪ್ರಮುಖನಾಗಿರುವ, ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಹಾಗೆಯೇ ಬಿಜೆಪಿ ಪಕ್ಷದ ಪೋಲಾ ಪ್ರವೀಣ್ ಮತ್ತು ವೆಂಕಟೇಶ್ ಬಾಬು ಎಂಬವರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.


ರಾಜ್ಯದ ಹಲವು ಕಡೆಗಳಲ್ಲಿ ವೈದ್ಯಕೀಯ ವ್ಯವಸ್ಥೆ ಇಲ್ಲದೆ, ಆಕ್ಸಿಜನ್ ದುರಂತದಿಂದ, ಹಾಸಿಗೆ ವ್ಯವಸ್ಥೆಗಳಿಲ್ಲದೆ ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿರುವಾಗ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಅಂಗ ಸಂಸ್ಥೆಯಾದ ಎ.ಬಿ.ವಿ.ಪಿಯ ನಾಯಕನನ್ನು ಮತ್ತು ಬಿಜೆಪಿಯ ಹಿನ್ನೆಲೆಯಿರುವ ಉದ್ಯಮಿಗಳನ್ನು ರೆಮಿಡಿಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಪ್ರಕರಣದಲ್ಲಿ ಬಂಧಿಸಿದ್ದು, ರಾಜ್ಯದ ಜನರಲ್ಲಿ ಆತಂಕ ಮೂಡಿಸಿದ್ದಲ್ಲದೆ, ಸರಕಾರದ ಮೇಲೆ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಬಂಧನವಾಗಿರುವ ಅರೋಪಿಗಳು
ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಬೆಂಬಲಿಗರಾಗಿರುವುದರಿಂದ
ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಈ ಪ್ರಕರಣವು ಸ್ಥಿರತೆಯನ್ನು ಕಳೆದುಕೊಳ್ಳಬಾರದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆದು ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮವನ್ನು ತಗೆದುಕೊಳ್ಳಬೇಕಾಗಿ ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸೊಹೈಲ್ ಹೊಸಪೇಟೆ ಆಗ್ರಹಿಸಿದ್ದಾರೆ.

error: Content is protected !!

Join the Group

Join WhatsApp Group