ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ ➤ ಸ್ಥಳೀಯರಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 24. ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಗೂಡಿನಬಳಿ ನಿವಾಸಿ ಜೀವರಕ್ಷಕರಾದ ಸತ್ತಾರ್ ಗೂಡಿನಬಳಿ ಹಾಗೂ ಸ್ವಾದಿಕ್ ಎಂ ಕೆ ಎಂಬವರು ನದಿಗೆ ಧುಮುಕಿ ರಕ್ಷಿಸಿದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಶ್ರವಣಬೆಳಗೊಳ ಮೂಲದವನು ಎನ್ನಲಾಗಿದೆ. ಯುವಕ ಶುಕ್ರವಾರದಂದು ಸಂಜೆ ಪಾಣೆಮಂಗಳೂರು ಹೊಸ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು, ಜೀವರಕ್ಷಕ ಸತ್ತಾರ್ ಅವರಿಗೆ ಸುದ್ದಿ ತಲುಪಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸತ್ತಾರ್ ಹಾಗೂ ಸ್ವಾದಿಕ್ ಎಂಬವರು ಜೊತೆಗೂಡಿ ನದಿಗೆ ಧುಮುಕಿ ಯುವಕನನ್ನು ರಕ್ಷಿಸಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಯುವಕನನ್ನು ಪೊಲೀಸರ ಸಹಾಯದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಆತನ ಸಂಬಂಧಿಕರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಯುವಕನ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ.

error: Content is protected !!

Join the Group

Join WhatsApp Group