ನಾಗರಹಾವನ್ನು ಹಿಡಿಯುತ್ತಿದ್ದ ವೇಳೆ ಹಾವು ಕಡಿತ ➤ ಉಪ್ಪಿನಂಗಡಿಯ ‘ಸ್ನೇಕ್ ಮುಸ್ತ’ ಮೃತ್ಯು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.17. ಹಾವು ಹಿಡಿಯುವ ಮೂಲಕ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಉಪ್ಪಿನಂಗಡಿ ನಿವಾಸಿ ಎಂ.ಆರ್.ಮುಹಮ್ಮದ್ ಮುಸ್ತಾಫ ಶನಿವಾರ ನಾಗರಹಾವಿನ ಕಡಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.





ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಇವರಿಗೆ ಕರೆ ಬಂದಿದ್ದು, ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರಿಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ಯುವ ಹಾದಿ ಮಧ್ಯೆ ಇವರು ಮೃತಪಟ್ಟಿದ್ದಾರೆ‌. ಹಾವು ಹಿಡಿಯುವುದರಲ್ಲಿ ನಿಪುಣತೆಯನ್ನು ಹೊಂದಿದ್ದ ಇವರು ಸುಮಾರು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು, ಇದಕ್ಕಾಗಿ ಹಲವು ಸಂಘ- ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.






 

 

error: Content is protected !!
Scroll to Top