ಉಪ್ಪಿನಂಗಡಿಯ ನಾಗರಿಕರನ್ನು ದೇಶದ್ರೋಹಿಗಳಿಗೆ ಹೋಲಿಸಿದ ಶಾಸಕರ ಹೇಳಿಕೆ ವಾಪಸ್ ಪಡೆಯಬೇಕು- ಪಿಎಫ್ಐ ➤ ಸಂಘಪರಿವಾರದಲ್ಲಿ ಇರುವಷ್ಟು ದೇಶದ್ರೋಹಿಗಳು ಬೇರೆಲ್ಲೂ ಇಲ್ಲ- ಹಮೀದ್ ಮೆಜೆಸ್ಟಿಕ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.06. ಬಿಜೆಪಿಯ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಸಂಜೀವ ಮಠಂದೂರು ಮಾತನಾಡುತ್ತಾ ಉಪ್ಪಿನಂಗಡಿಯಲ್ಲಿ ಇರುವಷ್ಟು ದೇಶದ್ರೋಹಿಗಳು ಮತ್ತು ಮತಾಂಧರು ಬೇರೆಲ್ಲೂ ಇಲ್ಲ ಎಂಬ ಹೇಳಿಕೆ ನೀಡಿ ಸಮಸ್ತ ಉಪ್ಪಿನಂಗಡಿಯ ನಾಗರಿಕರನ್ನು ದೇಶದ್ರೋಹಿಗಳಿಗೆ ಹೋಲಿಸಿದ ಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ.

ಈ ಹಿಂದೆ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದಂತೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮಾತನಾಡಿರುವುದು ಒಪ್ಪುವಂತಹದಲ್ಲ. ಇಂತಹ ಸಾಮರಸ್ಯ ವಿರೋಧಿ ಹೇಳಿಕೆಗಳು ಬಿಜೆಪಿ ಮತ್ತು ಆರ್.ಎಸ್.ಎಸ್ ನವರಿಂದ ಪದೇ ಪದೇ ಆವರ್ತಿಸುತ್ತಿದೆ. ಕ್ಷುಲ್ಲಕ ವಿಚಾರವನ್ನು ಇಟ್ಟುಕೊಂಡು ಉಪ್ಪಿನಂಗಡಿ ಪರಿಸರದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಮತ್ತು ನೈತಿಕ ಪೋಲಿಸ್ ಗಿರಿಯನ್ನು ಮಾಡುವ ಕಾರ್ಯವನ್ನು ಬಿಜೆಪಿ ಮತ್ತು ಆರ್.ಎಸ್.ಎಸ್ ಪದೇಪದೇ ಮಾಡುತ್ತಿದೆ.

ಒಬ್ಬ ಜನ ಪ್ರತಿನಿಧಿಯಾಗಿದ್ದುಕೊಂಡು ಈ ತರಹದ ಹೇಳಿಕೆ ನೀಡುವುದು ಕಾನೂನಿಗೆ ವಿರುದ್ಧವಾಗಿದೆ. ಸಮಸ್ತ ಉಪ್ಪಿನಂಗಡಿಯ ನಾಗರಿಕರ ಬಗ್ಗೆ ಕೀಳಾಗಿ ಮಾತನಾಡಿರುವ ಶಾಸಕರು ಆ ಸ್ಥಾನದಲ್ಲಿರಲು ನಾಲಾಯಕ್. ಕೊಳಕು ಬಾಯಿಯ ಈಶ್ವರಪ್ಪನ ರೀತಿಯಂತಹ ಹೇಳಿಕೆ ಕೊಡುವುದು ನಮ್ಮ ಶಾಸಕರಿಗೆ ಶೋಭೆ ತರುವಂತದ್ದಲ್ಲ. ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಒಳ್ಳೆಯ ಹೆಸರಿರುವಂತಹ ಶಾಸಕರು ಕೀಳುಮಟ್ಟದ ಹೇಳಿಕೆಗಳನ್ನು ನೀಡಬಾರದು. ಶಾಸಕರೇ ಈ ತರಹ ಹೇಳಿಕೆ ನೀಡಿದರೆ ಸಾಮಾನ್ಯ ಕಾರ್ಯಕರ್ತರ ವರ್ತನೆ ಕೂಡಾ ಕೀಳುಮಟ್ಟದಲ್ಲೇ ಇರುತ್ತದೆ ಮತ್ತು ಉಪ್ಪಿನಂಗಡಿಯ ನಾಗರಿಕರಲ್ಲಿ ಶಾಸಕರು ಬಹಿರಂಗ ಕ್ಷಮೆ ಕೇಳಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಆಗ್ರಹಿಸಿದ್ದಾರೆ.

error: Content is protected !!

Join the Group

Join WhatsApp Group