ಸಂತ್ರಸ್ಥೆ ನೀಡುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ➤ ರೋಹಿತ್ ಸಿ.ಜಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 02. ಪೋಕ್ಸೋ ಸಂತ್ರಸ್ಥೆಯ ಹೇಳಿಕೆ ಪಡೆಯುವಾಗ ಮಹಿಳಾ ಪೋಲಿಸ್ ಅಧಿಕಾರಿಗಳು ಮರು ಪ್ರಶ್ನೆಯನ್ನು ಕೇಳಬಾರದು ಸಂತ್ರಸ್ಥೆ ನೀಡುತ್ತಿರುವ ಹೇಳಿಕೆಯನ್ನು ಅದೇ ರೀತಿ ದಾಖಲಿಸಿಕೊಳ್ಳಬೇಕು ಎಂದು ಪೋಲಿಸ್ ತರಬೇತಿದಾರರಾದ ರೋಹಿತ್ ಸಿ.ಜಿ,  ಹೇಳಿದರು. ಅವರು ಜನವರಿ 30 ರಂದು ಜಿಲ್ಲಾಧಿಕಾರಿ ಕಛೇರಿಯ 2ನೇ ಮಹಡಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಕಾಯಿದೆಗಳಲ್ಲಿ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ಜಿಲ್ಲಾ ಮಟ್ಟದ ತರಬೇತಿಯನ್ನು  ಉದ್ಘಾಟಿಸಿ ಮಾತನಾಡಿದರು.

 

ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ನಿರ್ವಹಣೆಯಲ್ಲಿ ಪೋಲಿಸರ ಜವಾಬ್ದಾರಿಗಳಾದ ಪೋಕ್ಸೊ ಪ್ರಕರಣ ದೂರು ಬಂದ 24 ಗಂಟೆಗಳೊಳಗೆ ಪ್ರಥಮ ವರ್ತಮಾನ ವರದಿ ದಾಖಲು ಮಾಡುವ ಅಂಶಗಳ ಬಗ್ಗೆ, ಪೋಕ್ಸೋ ಸಂತ್ರಸ್ಥರ ಹೇಳಿಕೆ ಪಡೆಯುವ ಬಗ್ಗೆ, ಬಾಲ್ಯ ವಿವಾಹ ಮಕ್ಕಳ ಮಾರಾಟ ಸಾಗಾಟ, ಬಾಲಕಾರ್ಮಿಕ ಹಾಗೂ ಮಕ್ಕಳ ಭಿಕ್ಷಾಟನೆ, ತಡೆಗಟ್ಟುವಲ್ಲಿ ಪೋಲಿಸರ ಪಾತ್ರದ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದರು. ಪೋಕ್ಸೋ ಪ್ರಕರಣದಲ್ಲಿ ಪ್ರಥಮ ವರ್ತಮಾನ ವರದಿಯ ಪ್ರತಿಯನ್ನು ಕಡ್ಡಾಯವಾಗಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಬೇಕು. ಪ್ರಥಮ ವರ್ತಮಾನ ದಾಖಲಾದ 24 ಗಂಟೆಯೊಳಗೆ ನ್ಯಾಯಾಲಯದಲ್ಲಿ 164 ಸ್ಟೇಟ್‍ ಮೆಂಟ್ ದಾಖಲಿಸಿಕೊಳ್ಳಲು ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲು ವೈದ್ಯಧಿಕಾರಿಯವರಿಗೆ ಹೇಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾದ ಸಿಸ್ಟರ್ ದುಲ್ಸಿನ್ಸ್ ಮಾತನಾಡಿ ವಿಶೇಷ ಮಕ್ಕಳ ಪೋಲಿಸ್ ಘಟಕ ಹಾಗೂ ಜೆ.ಜೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಸಣ್ಣ ಪುಟ್ಟ ಮತ್ತು ಗಂಭೀರ ಪ್ರಕರಣಗಳಲ್ಲಿ ಪ್ರಥಮ ವರ್ತಮಾನ ದಾಖಲಿಸುವ ಬದಲು ಜೆ.ಜೆ ನಿಯಮದಲ್ಲಿ ತಿಳಿಸಿರುವ ನಮೂನೆ 01 ನ್ನು ಭರ್ತಿ ಮಾಡಿ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕು ಎಂದರು.

Also Read  'ನಮ್ಮ ಮೆಟ್ರೊ'ದಲ್ಲಿ ಗುತ್ತಿಗೆ ಆಧಾರಿತ ಉದ್ಯೋಗಕ್ಕೆ ಅರ್ಜಿ ಆಹ್ವಾನ..!!

 

ಘೋರ ಅಪರಾಧಗಳಲ್ಲಿ ಮಾತ್ರ ಪ್ರಥಮ ವರ್ತಮಾನ ವರದಿ ದಾಖಲು ಮಾಡಿ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕು. ಸಣ್ಣ ಪುಟ್ಟ ಮತ್ತು ಗಂಭೀರ ಅಪರಾಧಗಳನ್ನು ವಯಸ್ಕರ ಜೊತೆ ಸೇರಿ ಮಾಡಿದ್ದರೆ. ಅಂತಹ ಸಂದರ್ಭದಲ್ಲಿ ಈ ಪ್ರಕರಣಗಳಲ್ಲಿ ಜೆ.ಜೆ ಕಾಯ್ದೆಯ ಪ್ರಕಾರ ಪ್ರಥಮ ವರ್ತಮಾನ ವರದಿ ದಾಖಲಿಸಬಹುದೆಂದು ತಿಳಿಸಿದರು. ಪ್ರಕರಣದ ಅಂತಿಮ ವರದಿಯನ್ನು ಎರಡು ತಿಂಗಳ ಅವಧಿಯೊಳಗೆ ಬಾಲನ್ಯಾಯ ಮಂಡಳಿಗೆ ಸಲ್ಲಿಸಬೇಕು. ಜೆ.ಜೆ ಕಾಯ್ದೆಯಲ್ಲಿ ತಿಳಿಸಿರುವಂತೆ ಪ್ರತಿ ಪೋಲಿಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಯವರು ಇರಬೇಕು ಎಂದು ತಿಳಿಸಿದರು. ತರಬೇತಿಯ ಕೊನೆಯಲ್ಲಿ ಸಂಪನ್ಮೂಲ ವ್ಯಕಿಗಳು, ಇಲಾಖಾಧಿಕಾರಿಗಳು, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ಘಟಕದ ಸಿಬ್ಬಂದಿಯವರೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ  ಉಪನಿದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು, ಟಿ ಪಾಪ ಬೋವಿ,  ಇವರು ವಹಿಸಿದರು. ರಿಸೋರ್ಸ್ & ಡೆವಲೆಪ್‍ ಮೆಂಟ್ ಸೆಂಟರ್ ಫಾರ್ ಚೈಲ್ಡ್ ರೈಟ್ಸ್ ಹಾಗೂ ಮಂಗಳೂರು ಮಹಿಳಾ ಪೋಲಿಸ್ ಠಾಣೆ ಪಾಂಡೇಶ್ವರ ಸಬ್ ಇನ್ಸ್‍ಪೆಕ್ಟರ್ ರೋಜಮ್ಮ ಉಪಸ್ಥಿತರಿದ್ದರು. ಜಿಲ್ಲಾ ಮಕ್ಳಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್ ಸ್ವಾಗತಿಸಿದರು.

Also Read  ಜು.27ರಿಂದ ಸುಳ್ಯ-ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಬಸ್ ಸರ್ವೀಸ್ ಆರಂಭ

error: Content is protected !!
Scroll to Top