ರೈಲ್ವೇ ಕ್ರಷರ್ ನಲ್ಲಿ ಭೀಕರ ಸ್ಫೋಟ ➤ 15ಕ್ಕೂ ಹೆಚ್ಚು ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜ. 22. ಇಲ್ಲಿನ ರೈಲ್ವೇ ಕ್ರಷರ್ ಒಂದರಲ್ಲಿ ಭಾರೀ ಸ್ಫೋಟ ಉಂಟಾಗಿದ್ದು, ಇದರಲ್ಲಿ ಸುಮಾರು ಕನಿಷ್ಠ 15 ಕಾರ್ಮಿಕರು ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಅಕ್ರಮ ಕಲ್ಲು ಗಣಿಗಾರಿಕೆಗೆಂದು ಸುಮಾರು 50 ಡೈನಮೈಟ್‌ ಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಡೈನಮೈಟ್ ಸಿಡಿದ ಪರಿಣಾಮ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿವೆ. ಲಾರಿಯ ತುಂಬಾ ಡೈನಮೈಟ್‌ ಗಳನ್ನು ಸಾಗಿಸಲಾಗುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಲ್ಲ ಕಾರ್ಮಿಕರೂ ಮೃತಪಟ್ಟಿದ್ದಾರೆ. ಅವರೆಲ್ಲರೂ ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ, ಸ್ಫೋಟದ ತೀವ್ರತೆಗೆ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ. ಐದಾರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು, ಘಟನೆಯಲ್ಲಿ ಇನ್ನಷ್ಟು ಜನರು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಕತ್ತಲೆಯಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಹಾಗೆಯೇ ಸ್ಥಳದಲ್ಲಿ ಸ್ಫೋಟಗೊಳ್ಳದ ಜೀವಂತ ಡೈನಾಮೈಟ್‌ಗಳು ಇರುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಕೇಳಿ ಬರುತ್ತಿದೆ. ರಾತ್ರಿ 10-20 ರಿಂದ 10-25ರ ವೇಳೆಗೆ ಶಿವಮೊಗ್ಗದಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು. ಇದು ಭೂಕಂಪ ಎಂದೇ ಹೇಳಲಾಗಿತ್ತು. ಆದರೆ ಇದು ವಾಸ್ತವವಾಗಿ ಅಕ್ರಮ ಕಲ್ಲು ಕ್ವಾರಿಯಲ್ಲಿ ಉಂಟಾದ ಸ್ಫೋಟ ಎಂದು ತಿಳಿದುಬಂದಿದೆ.

error: Content is protected !!

Join the Group

Join WhatsApp Group