ಆತೂರು: ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಎಸ್‌.ಡಿಪಿಐ ಆತೂರು ವಲಯದ ವತಿಯಿಂದ ಮೆಸ್ಕಾಂ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಜ. 04. ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಹಲವಾರು ಹಳ್ಳಿ ಪ್ರದೇಶಗಳಿಗೆ ಲೋ ವೋಲ್ಟೇಜ್ ಸಮಸ್ಯೆ ಉದ್ಭವಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯದ ವತಿಯಿಂದ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಎಸ್‌.ಡಿಪಿಐ ಗ್ರಾಮ ಪಂಚಾಯತ್ ಸದಸ್ಯ ಹಸನ್ ಸಜ್ಜಾದ್ ಮಾತನಾಡಿ ಲೋ ವೋಲ್ಟೇಜ್ ಸಮಸ್ಯೆ ಇವತ್ತು ನಿನ್ನೆಯದಲ್ಲ, ಹಲವಾರು ವರ್ಷಗಳಿಂದ ಮೆಸ್ಕಾಂ ಗೆ ಎಸ್‌.ಡಿಪಿಐ ಸೇರಿದಂತೆ ಹಲವಾರು ನಾಗರಿಕರು ಮನವಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಮೆಸ್ಕಾಂ ಗಣನೆಗೆ ತೆಗೆದುಕೊಳ್ಳದ ಕಾರಣ ಸಮಸ್ಯೆ ಮತ್ತಷ್ಟು ದ್ವಿಗುಣಗೊಂಡಿದ್ದು, ಮನೆಯ ವಿದ್ಯುತ್ ಉಪಕರಣ ಸೇರಿದಂತೆ, ಕೃಷಿಯನ್ನೇ ಅವಲಂಬಿತರಾದ ರೈತರಿಗೆ ಪಂಪ್ ಸೆಟ್ ಮೂಲಕ ತೋಟಕ್ಕೆ ನೀರು ಹಾಯಿಸಲು ಕೂಡಾ ಕಷ್ಟಕರವಾಗಿದ್ದರಿಂದ ಹಲವಾರು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮೆಸ್ಕಾಂ ಇಲಾಖೆ ಶೀಘ್ರ ಸ್ಪಂದಿಸದಿದ್ದಲ್ಲಿ ಎಸ್‌.ಡಿಪಿಐ ಪಕ್ಷವು ಗ್ರಾಮದ ಮತ್ತು ಊರಿನ ನಾಗರಿಕರ ಜೊತೆಗೂಡಿ ಮೆಸ್ಕಾಂಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಸ್‌.ಡಿಪಿಐ ಕಡಬ ತಾಲೂಕು ಜೊತೆ ಕಾರ್ಯದರ್ಶಿ ಬಶೀರ್ ಹಲ್ಯಾರ, ಎಸ್‌.ಡಿಪಿಐ ಆತೂರು ವಲಯಾಧ್ಯಕ್ಷ ಇಸ್ಮಾಯಿಲ್ ಆತೂರು, ಎಸ್‌.ಡಿಪಿಐ ವಲಯ ಸಮಿತಿ ಸದಸ್ಯ ಶರೀಫ್ ಬಿಎಸ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group