ಅಮರಶಿಲ್ಪಿ ಜಕಣಾಚಾರ್ಯರ ಕಲೆ ಇಂದಿಗೂ ಸಹ ಜನರ ಮಾನಸದಲ್ಲಿ ಉಳಿದಿದೆ ➤ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಅಮರ  ಶಿಲ್ಪಿ ಜಕ್ಕಣಾಚಾರ್ಯ ನಿರ್ಮಿಸಿರುವ ಸುಪ್ರಸಿದ್ಧ ಬೇಲೂರು, ಹಳೆಬೀಡಿನ ದೇವಾಲಯಗಳ ಶಿಲ್ಪಕಲೆ ವಿಶ್ವ ವಿಖ್ಯಾತಿ ಹೊಂದುವುದರ ಜೊತೆಗೆ ಇಂದಿಗೂ ಜನಮಾನಸದಲ್ಲಿ ಉಳಿದಿದೆ  ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ವತಿಯಿಂದ ಆಯೋಜಿಸಿದ ಅಮರ ಶಿಲ್ಪಿ ಜಕ್ಕಣಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಮರಶಿಲ್ಪಿ ಜಕಣಾಚಾರಿಯವರ ನಾಜೂಕಾದ ಕೆತ್ತನೆಯ ಮೂಲಕ ಶಿಲ್ಪಕಲೆಗೆ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಶಿಲೆಯಲ್ಲಿ ಕಲೆಯನ್ನು ಅರಳಿಸಿರುವುದನ್ನು ನಾವು ಈಗಲೂ ಕಾಣಬಹುದಾಗಿದೆ ಎಂದರು. ನಮ್ಮ ರಾಜ್ಯ ಇತಿಹಾಸದಲ್ಲಿ ರಾಜ-ಮಹಾರಾಜರುಗಳು ಶಿಲ್ಪ ಕಲೆಗೆ ವಿಶೇಷವಾದ ಮಹತ್ವ ನೀಡಿರುವುದು ನಾವು ಕಾಣಬಹುದಾಗಿದೆ ಎಂದ ಅವರು ಶಿಲ್ಪ ಕಲೆಗೆ ಉತ್ತೇಜನ ನೀಡಲು ಸರ್ಕಾರ ಅವರ ಹೆಸರಿನಲ್ಲಿ ಶಿಲ್ಪ ಕಲೆಗೆ ಹೆಚ್ಚಿಗೆ ಕೊಡುಗೆ ನೀಡಿದ ಕಲೆಗಾರರಿಗೆ ಪ್ರಶಸ್ತಿಯನ್ನು ನೀಡುವುದರೊಂದಿಗೆ ಶಿಲ್ಪ ಕಲೆಗಾರರಿಗೆ  ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ ಎಂದರು. ವಿಧ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಲ್ಪ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಇಂತಹ ಕಲೆ ಉಳಿಸಿ ಬೆಳಿಸಿದಾಗ ಮಾತ್ರ ಜಕಣಾಚಾರಿ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಇವತ್ತಿಗೂ ಕೂಡಾ ಜಕಣಾಚಾರ್ಯರನ್ನು ಅಮರಶಿಲ್ಪಿ ಎಂದು ಹೇಳಲು ಕಾರಣವೇನೆಂದರೆ ಅವರು ನಿರ್ಮಿಸುತ್ತಿದ್ದಂತಹ ದೇವಾಲಯಗಳನ್ನು ಯಾರೂ ನಿರ್ಮಿಸಲು ಸಾಧ್ಯವಿಲ್ಲ. ಅವರ ರೇಖಾ ಗಣಿತದ ಬಗ್ಗೆ ವಿಶ್ಲೇಷಿಸಿದರು. ರಾಜ್ಯ ಸರ್ಕಾರದಿಂದ ಮೊದಲ ಬಾರಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಅಮರಶಿಲ್ಪಿ ಜಕ್ಕಣಾಚಾರ್ಯ ಜಯಂತಿ ಆಚರಿಸಲಾಯಿತು. ನಗರದ ರಥಬೀದಿ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ 2ನೇ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ, 3ನೇ ಮೊಕ್ತೇಸರರಾದ ಎ. ಲೋಕೆಶ್ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ಮಂಗಳೂರು ಉತ್ತರ: ಗೆಲುವಿನ ಪತಾಕೆ ಹಾರಿಸಿದ ಬಿಜೆಪಿ

error: Content is protected !!
Scroll to Top