ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು ➤ ಆಸ್ಪತ್ರೆಗೆ ದಾಖಲಿಸಿದ ಯುವಕ ಎಸ್ಕೇಪ್

(ನ್ಯೂಸ್ ಕಡಬ) newskadaba.com ಉಡುಪಿ . 25: ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವತಿಯನ್ನು ಉಡುಪಿ ತಾಲೂಕು ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಪ್ರಶಾಂತ್ ಕುಂದರ್ ಎಂಬಾತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಆಟೋದಲ್ಲಿ ಕರೆದುಕೊಂಡು ಬಂದು ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ವೈದ್ಯರು ಯುವತಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಕೂಡಲೇ ಯುವಕ, ಯುವತಿಯ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಯುವಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಉಡುಪಿ ನಗರ ಠಾಣೆ ಪೊಲೀಸ್ ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಯುವತಿಯ ಮೃತದೇಹವನ್ನು ರವಾನಿಸಿದ್ದಾರೆ. ರಕ್ಷಿತಾ ನಾಯಕ್ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಬೇಕಾಗಿದೆ. ಪ್ರಶಾಂತ್ ಕುಂದರ್ ಗೆ ಈ ಹಿಂದೆಯೇ ಬೇರೆ ಮದುವೆಯಾಗಿದ್ದು, ರಕ್ಷಿತಾ ಜೊತೆ ಸಂಪರ್ಕದಲ್ಲಿದ್ದ. ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಮನೆ ಮಾಡಿದ್ದರು ಎಂದು ಉಡುಪಿ ನಗರ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಾನು ಕೆಲಸಕ್ಕೆ ಇರುವುದಾಗಿ ಮನೆಯಲ್ಲಿ ಹೇಳಿದ್ದ ರಕ್ಷಿತಾ, ಪ್ರಶಾಂತ್ ಕುಂದರ್ ಜೊತೆ ವಾಸವಾಗಿದ್ದಳು ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸದ್ಯದಲ್ಲೇ ಕೊರೊನಾ ಲಸಿಕೆ ➤ ಸಚಿವ ಡಾ.ಕೆ. ಸುಧಾಕರ್‌

 

 

error: Content is protected !!
Scroll to Top