ಬೆಂಗಳೂರಿನಲ್ಲಿ ರಸ್ತೆಗಿಳಿದ ಎಲೆಕ್ಟ್ರಿಕ್ ಬಸ್

(ನ್ಯೂಸ್ ಕಡಬ) newskadaba.com ಬೆಂಗಳೂರು . 23: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇಶಿಯ ನಿರ್ಮಿತ ಓಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಗುರುವಾರ ಚಾಲನೆ ನೀಡಿದರು. ಬಿಎಂಟಿಸಿಯ ಕೇಂದ್ರ ಕಚೇರಿ ಆವರಣದಲ್ಲಿ ಈ ಬಸ್‍ಗೆ ಚಾಲನೆ ನೀಡಿದ ನಂತರ ವಿಧಾನಸೌಧದವರೆಗೂ ಅದೇ ಬಸ್‍ನಲ್ಲಿ ಪ್ರಯಾಣಿಸಿದರು.

ವಿಧಾನಸೌಧದ ಆವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಎಲೆಕ್ಟ್ರಿಕ್ ಬಸ್‍ನ್ನು ವೀಕ್ಷಣೆ ಮಾಡಿ ನಂತರ ಉಪಮುಖ್ಯಮಂತ್ರಿಯವರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್‍ಗಳನ್ನು ಖರೀದಿಸುವ ಉದ್ದೇಶವಿದೆ. ಪ್ರಾಯೋಗಿಕ ಬಸ್ ಆಗಿದ್ದು, ಇದು ಎಲ್ಲ ರೀತಿಯಲ್ಲಿ ಅನುಕೂಲವಾಗಿದ್ದರೆ ಆನಂತರ ಎಲೆಕ್ಟ್ರಿಕ್ ಬಸ್‍ಗಳನ್ನು ಬಳಕೆ ಮಾಡಲಾಗುವುದು.

ಪ್ರತಿ ಬಸ್‍ಗೆ ಭಾರೀ ಕೈಗಾರಿಕೆ ಇಲಾಖೆಯು 55 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ ಎಂದರು.ಒಮ್ಮೆಗೆ 100ರಿಂದ 125 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮಥ್ರ್ಯದ ಈ ಬಸ್‍ಗೆ ಪದೇ ಪದೇ ಚಾರ್ಜಿಂಗ್ ಅಗತ್ಯವಿಲ್ಲ. ಇದರಿಂದ ಬಸ್ ಸೇವೆ ಬಿಎಂಟಿಸಿಗೆ ಲಾಭಕರವಾಗಲಿದೆ. ಅಲ್ಲದೆ ಹಿರಿಯ ನಾಗರೀಕರಿಗೆ ವ್ಹೀಲ್ ಚೇರ್ ವ್ಯವಸ್ಥೆಯನ್ನೂ ಹೊಂದಿದೆ. ಎಲ್ಲ ಸುರಕ್ಷತಾ ವ್ಯವಸ್ಥೆಯೊಂದಿಗಿನ ಹೈಟೆಕ್ ಬಸ್ ಆಗಿದೆ. ಕಾರ್ಬನ್ ಅನಿಲಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದು ಓಲೆಕ್ಟ್ರಾ ಬಸ್ ಒದಗಿಸಿರುವ ಸಂಸ್ಥೆ ತಿಳಿಸಿದೆ. ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ನಿರ್ದೇಶಕರಾದ ಡಾ.ಅರುಣ್, ಸಂತೋಷ್ ಬಾಬು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Also Read  ಸಿ.ಟಿ ರವಿ ಪ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು

error: Content is protected !!
Scroll to Top