ಅಕ್ರಮವಾಗಿ 30 ಜಾನುವಾರುಗಳ ಸಾಗಾಟ ➤ ನಾಲ್ವರು ಆರೋಪಿಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಹೊಸಂಗಡಿ, ಸೆ. 06. ಇಲ್ಲಿನ ಚೆಕ್‌‌ಪೋಸ್ಟ್‌‌ ನಲ್ಲಿ ವಾಹನ ತಪಾಸಣೆ ವೇಳೆ ಲಾರಿಯಲ್ಲಿ ಅಕ್ರಮವಾಗಿ, ಹಿಂಸಾತ್ಮಕವಾಗಿ 30 ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಜಾನುವಾರುಗಳ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳನ್ನು ಹರಿಯಾಣ ಮೂಲದ ಮಂಜಿತ್ ಸಿಂಗ್ (38) ಪವನ್ ಕುಮಾರ್ (32) ರಾಜಸ್ಥಾನ ಮೂಲದ ಗುಲ್ವಾಂ (29) ಹಾಗೂ ರವಿಕುಮಾರ್ (25) ಎಂದು ಗುರುತಿಸಲಾಗಿದೆ.

ಅಮಾಸೆಬೈಲು ಪೊಲೀಸ್ ಠಾಣೆಗೆ ಲಭಿಸಿದ ಖಚಿತ ಮಾಹಿತಿಯಂತೆ ಪಿಎಸ್‍ಐ ಅನಿಲ್ ಕುಮಾರ್ ಟಿ. ಎನ್ ಸಿಬ್ಬಂದಿಗಳೊಂದಿಗೆ ಹೊಸಂಗಡಿ ಚೆಕ್ ಪೋಸ್ಟ್‌‌ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಬರುತ್ತಿದ್ದ ಲಾರಿಯನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಟರ್ಪಾಲು ಮುಚ್ಚಿದ ಬಾಡಿಯಲ್ಲಿ ಸುಮಾರು 30 ಜಾನುವಾರುಗಳಿದ್ದವು ಎನ್ನಲಾಗಿದೆ. ಈ ಜಾನುವಾರುಗಳಿಗೆ ಯಾವುದೇ ಮೇವು, ಆಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಮಿಸುಕಾಡದಂತೆ ಹಿಂಸ್ಮಾತಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಬಂದಿದೆ. ಘಟನೆಯ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಾಲಕಿಯರಿಗೆ ಕಿರುಕುಳ   ➤ಮದ್ರಸ ಶಿಕ್ಷಕ  ಅರೆಸ್ಟ್

error: Content is protected !!
Scroll to Top