ಬಾನುಲಿಯಲ್ಲಿ ಕನಕ ತತ್ತ್ವ ಚಿಂತನ

(ನ್ಯೂಸ್‌ ಕಡಬ) neewskadaba.com ಮಂಗಳೂರು, ಆಗಸ್ಟ್,17. ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ತತ್ತ್ವಚಿಂತನ ಪ್ರಚಾರೋಪನ್ಯಾಸ’ ಮಾಲಿಕೆಯ 2020-21ನೇ ಸಾಲಿನ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿಯ ಮೂಲಕ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 25 ರವರೆಗಿನ ಪ್ರತೀ ಶುಕ್ರವಾರ ರಾತ್ರಿ 7.45 ಕ್ಕೆ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ಮೊದಲ ಉಪನ್ಯಾಸ `ಕನಕ : ಸಮಸಮಾಜ ನಿರ್ಮಾಣದ ಕನಸು’ ಎಂಬ ವಿಷಯದ ಕುರಿತು ಪ್ರೊ. ವರದರಾಜ ಚಂದ್ರಗಿರಿ ಬೆಟ್ಟಂಪಾಡಿ, ಎರಡನೇ ಉಪನ್ಯಾಸ `ಕನಕದಾಸರ ಕೀರ್ತನೆಗಳು : ಸಮಕಾಲೀನ ಸಂವಾದ’ ಎಂಬ ವಿಷಯದ ಕುರಿತು ಡಾ. ಆನಂದ ಋಗ್ವೇದಿ ದಾವಣಗೆರೆ, ಮೂರನೇ ಉಪನ್ಯಾಸ `ಕನಕದಾಸರ ನಳಚರಿತ್ರೆ’ ಎಂಬ ವಿಷಯದ ಕುರಿತು ಡಾ. ರಾಜಶೇಖರ ಹಳೆಮನೆ ಉಜಿರೆ,  ನಾಲ್ಕನೇ ಉಪನ್ಯಾಸ `ಕನಕದಾಸರ ಮೋಹನತರಂಗಿಣಿ’ ಎಂಬ ವಿಷಯದ ಕುರಿತು ಡಾ. ಬಾಲಕೃಷ್ಣ ಹೊಸಂಗಡಿ ಕಾಸರಗೋಡು, ಐದನೇ ಉಪನ್ಯಾಸ `ಕನಕದಾಸರ ರಾಮಧಾನ್ಯ ಚರಿತ್ರೆ’ ಎಂಬ ವಿಷಯದ ಕುರಿತು ಡಾ. ಶರಭೇಂದ್ರ ಸ್ವಾಮಿ ರಾಯಚೂರು, ಆರನೇ ಉಪನ್ಯಾಸ  ‘ಕನಕದಾಸರ ಹರಿಭಕ್ತಿಸಾರ’ ಎಂಬ ವಿಷಯದ ಕುರಿತು ಡಾ. ಪ್ರಜ್ಞಾ ಮಾರ್ಪಳ್ಳಿ ಉಡುಪಿ ಉಪನ್ಯಾಸ ನೀಡಲಿರುವರು ಎಂದು  ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top