ಕಡಬ: ಅಕ್ಷರದಾಸೋಹ ಸಿಬ್ಬಂದಿಗಳಿಗೆ ಪ್ರೋತ್ಸಾಹ ಧನ ನೀಡುವಂತೆ ಎಸ್ಡಿಪಿಐ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಆ.18, ಕರ್ನಾಟಕ ರಾಜ್ಯಾದ್ಯಂತ ಇರುವ 54 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಟ್ಟು 1.70 ಲಕ್ಷ ಮಂದಿ ಅಡುಗೆಯವರು ಹಾಗೂ ಅಡುಗೆ ಸಹಾಯಕಿಯರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಸರಿಯಷ್ಟೆ. ಹೀಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಸರ್ಕಾರ ಕಳೆದ ಐದು ತಿಂಗಳಿನಿಂದ ಗೌರವ ಧನ ನೀಡದೇ ಇರುವುದು ಅತ್ಯಂತ ಖೇದಕರ.

ಈಗಾಗಲೇ ಲಾಕ್ ಡೌನ್ ನಿಂದಾಗಿ ಇತರೆ ಬೇರೆ ಕೆಲಸ ಸಹ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಡುಗೆ ಸಿಬ್ಬಂದಿ ವರ್ಗದವರಿಗೆ ಸರ್ಕಾರವು ಗೌರವ ಧನ ನೀಡದೆ ಇರುವುದರಿಂದ ಅವರ ಜೀವನ ಅಸ್ತವ್ಯಸ್ತವಾಗಿದೆ.

ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಡಿ. ಗ್ರೂಪ್ ನೌಕರರ ಸಂಖ್ಯೆ ಕಡಿಮೆಯಿದ್ದು, ಕೆಲವು ಶಾಲೆಗಳಲ್ಲಿ ಡಿ. ಗ್ರೂಪ್ ನೌಕರರು ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಡುಗೆಯವರು ಹಾಗೂ ಅಡುಗೆ ಸಹಾಯಕಿಯರಿಗೆ ತಮ್ಮ ಅಡುಗೆ ಕೆಲಸದ ಜೊತೆ ಜೊತೆಯಲ್ಲೇ ಶಾಲೆಯ ಸ್ವಚ್ಛತೆ ಮತ್ತು ಇತರೆ ಕೆಲಸ ಸಹ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗೆ ಶಾಲೆಗಳಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿ ವರ್ಗದವರಿಗೆ ಸರ್ಕಾರ  ಅವರ ಸೇವೆಗೆ ತಕ್ಕ ಪ್ರತಿಫಲ ನೀಡಬೇಕಾಗಿರುವುದರಿಂದ ಈ ಕೂಡಲೇ ಕಳೆದ ಐದು ತಿಂಗಳ ಗೌರವ ಧನವನ್ನು ಏಕಕಾಲಕ್ಕೆ ಪಾವತಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಈ ವಿಚಾರವಾಗಿ ಕಡಬ ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿ ಯವರಿಗೆ ಮನವಿಯನ್ನು ಸಲ್ಲಿಸಲಾಯಿತು.

Also Read  ಮಂಗಳೂರು: ಪೊಲೀಸ್ ಸಿಬ್ಬಂದಿಯ ಕೊಲೆ ಯತ್ನ ಪ್ರಕರಣ ➤ 8 ಮಂದಿ ಅರೆಸ್ಟ್


ಈ ಸಂದರ್ಭದಲ್ಲಿ ತಾಲೂಕು ಸಮಿತಿ ಉಪಾಧ್ಯಕ್ಷರಾದ ನೌಶಾದ್, ಖಜಾಂಜಿಯಾದ ಹಾರೀಸ್, ಸದಸ್ಯರಾದ ಕಮರುದ್ದೀನ್ ಹಾಗು ನೆಬಿ ಶಾನ್ ಉಪಸ್ಥಿತರಿದ್ದರು.

error: Content is protected !!
Scroll to Top