ಸರಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ ➤ ಡಿಕೆಶಿ ವಾಗ್ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 24, ‘ಸರ್ಕಾರವು ಹೆಣದ ಮೇಲೆ ಹಣ ಮಾಡಲು ಮುಂದಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಇದರ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೋನಾ ವಿಚಾರದಲ್ಲಿ ಸರ್ಕಾರವು ನಮ್ಮ ಬಳಿ ಸಹಕಾರ ಕೇಳಿದೆ, ನಾವು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದೇವೆ. ಆದರೆ ಸರ್ಕಾರ ಹೆಣದ ಮೇಲೆ ಹಣ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ಯಾವುದೇ ಒಂದು ಗುರಿ ಇಲ್ಲ, ಕೇವಲ ಭ್ರಷ್ಟಾಚಾರಕ್ಕಾಗಿ ಸರ್ಕಾರವಾಗಿ ಬಿಟ್ಟಿದೆ. ಬಿಜೆಪಿ ಸರ್ಕಾರದವರು ಕೊರೋನಾ ಸೋಂಕು ಹರಡಿಸುವುದರ ಜತೆಗೆ ಭ್ರಷ್ಟಾಚಾರದ ಸೋಂಕನ್ನೂ ಕೂಡಾ ಹಂಚಿದ್ದಾರೆ. ಯಾವುದೇ ಭ್ರಷ್ಟಾಚಾರ ಮಾಡಲಿಲ್ಲ ಎಂದಾದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ಮಾಡಲು ಹಾಗೂ ತಪಾಸಣೆ ನಡೆಸಲು ಅವಕಾಶ ನೀಡಿ. ಅದಕ್ಕೆ ನಿಮ್ಮ ಮನಸ್ಸು ಒಪ್ಪುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರ 21 ದಿನಗಳಲ್ಲಿ ಕೊರೋನಾ ಗೆಲ್ಲುವುದು ಎಂದು ಹೇಳಿದ್ದು ಈಗ 121 ದಿನ ಆಗಿದೆ. ಇದನ್ನು ಆಧುನಿಕ ಭಾರತದ ಕೌರವರ ಲೂಟಿ ಎಂದು ಕರೆಯಬೇಕೇ ಎಂದು ಪ್ರಶ್ನಿಸಿದ ಅವರು, ಭಾರತದಲ್ಲೇ ಕರ್ನಾಟಕ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ ಸಂಬಳ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ. ಕನಿಷ್ಟ ಮಟ್ಟ ಅವರನ್ನು ಕರೆದು ಮಾತನಾಡಿಸಲು ಕೂಡಾ ಸರ್ಕಾರದಿಂದ ಸಾಧ್ಯವಾಗಿಲ್ಲ. ಇತ್ತ ಪೌರ ಕಾರ್ಮಿಕರಿಗೂ ಯಾವ ರಕ್ಷಣೆಯೂ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

error: Content is protected !!

Join the Group

Join WhatsApp Group