ಮಡಿಕೇರಿ :ನಿವೃತ್ತಿಯಾದ ಒಂದೇ ತಿಂಗಳಿನಲ್ಲಿ ASI ಅತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಮಡಿಕೇರಿ, ಜೂ. 23: ಸಹಾಯಕ ಸಬ್‌ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಒಂದೇ ತಿಂಗಳಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ನಡೆದಿದೆ.

 

ಮೃತರನ್ನು ಎಂ.ಎಸ್‌ ಈರಪ್ಪ ಎಂದು ಗುರುತಿಸಲಾಗಿದ್ದು, ಇವರು ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿ ಕಳೆದ ಮೇ 30 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದರು.ಇಂದು ಬೆಳಿಗ್ಗೆ ತಮ್ಮ ಮನೆಯಲ್ಲೇ ಒಂಟಿ ನಳಿಕೆಯ ಬಂದೂಕು ಬಳಸಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Scroll to Top