ನೂತನ ಗೃಹ ಸಚಿವರ ನೇಮಕ ವಿಚಾರ ► ರಮಾನಾಥ ರೈಗೆ ಗೃಹ ಖಾತೆ ತಪ್ಪಿದ್ದು ಹೇಗೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.01. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯ ಗೃಹ ಖಾತೆಯು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರಿಗೆ ನೀಡಲಾಗುತ್ತದೆ ಎನ್ನುವ ಗುಸುಗುಸು ಸುದ್ದಿಗಳ ನಡುವೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿಜೆಪಿ ರಮಾನಾಥ ರೈ ವಿರುದ್ಧ ನಡೆಸಲು ಉದ್ದೇಶಿಸಿದ್ದ ಹೋರಾಟ ಹಾಗೂ ರೈ ಸಚಿವರಾದರೆ ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂಬ ಗುಪ್ತಚರ ವರದಿ.

 

ಹೀಗಾಗಿ, ಈ ಖಾತೆಯನ್ನು ಮತ್ತೊಬ್ಬ ಹಿರಿಯ ಸಚಿವ ರಾಮಲಿಂಗಾರೆಡ್ಡಿಗೆ ನೀಡಲು ಮನಸ್ಸು ಮಾಡಿದರು ಎಂದು ಮೂಲಗಳು ತಿಳಿಸಿವೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಹಿಡಿತ ಬಲಗೊಳಿಸಲು ಹಾಗೂ ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿರುವ ಸಂಘ ಪರಿವಾರಕ್ಕೆ ತಕ್ಕ ಉತ್ತರ ನೀಡಲು ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡಬೇಕು ಎಂಬುದು ಕರಾವಳಿ ಭಾಗದ ಕಾಂಗ್ರೆಸ್ ನಾಯಕರ ಆಗ್ರಹವಾಗಿತ್ತು. ಆರಂಭದಲ್ಲಿ ಇದು ಸಮಂಜಸವೆಂದೇ ಸಿಎಂ ಅವರಿಗೂ ತೋರಿತ್ತು.

ಅಲ್ಲದೆ, ರೈಗೆ ಗೃಹ ಖಾತೆ ನೀಡಿದರೆ ಆ ಖಾತೆಯನ್ನು ಪರೋಕ್ಷವಾಗಿ ಹತೋಟಿಯಲ್ಲಿಟ್ಟುಕೊಳ್ಳಲು ಅನುಕೂಲ ಎಂಬ ಯೋಚನೆಯೂ ಸಿದ್ದರಾಮಯ್ಯ ಆಪ್ತ ಬಳಗಕ್ಕೆ ಇತ್ತು. ಆದರೆ, ಬಿಜೆಪಿ ಹೋರಾಟ ಹಾಗೂ ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂಬ ಗುಪ್ತಚರ ಇಲಾಖೆ ವರದಿ ಹಿನ್ನೆಲೆಯಲ್ಲಿ ಸಿಎಂ ತಮ್ಮ ನಿಲುವು ಬದಲಾಯಿಸಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top