ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಮೈದುನನ ಕೊಂದ ಅತ್ತಿಗೆ ➤ ತಾಯಿ – ಮಗನ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.09. ಆಸ್ತಿ ತಕರಾರಿನ ಹಿನ್ನೆಲೆಯಲ್ಲಿ ಅತ್ತಿಗೆ ಹಾಗೂ ಮೈದುನನ ನಡುವೆ ಚಕಮಕಿ ನಡೆದು ಪಾನಮತ್ತನಾಗಿದ್ದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಸುಳ್ಯ ಸಮೀಪದ ಪೆರಾಜೆ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಪೆರಾಜೆ ಗ್ರಾಮದ ಪೀಚೆ ನಿವಾಸಿ ಶ್ರೀಮತಿ ತಾರಿಣಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಇವರ ನಡುವೆ ಆಸ್ತಿ ತಕರಾರು ಇತ್ತೆನ್ನಲಾಗಿದೆ. ಶುಕ್ರವಾರ ತಡರಾತ್ರಿ ಉತ್ತರಕುಮಾರ ಹಾಗೂ ಅತ್ತಿಗೆಯ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದ್ದು, ಅತ್ತಿಗೆ ಹಾಗೂ ಆಕೆಯ ಪುತ್ರ ಮೈದುನನಿಗೆ ಕತ್ತಿಯಿಂದ ಕಡಿದಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಉತ್ತರಕುಮಾರ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ಸಂಬಂಧ ಅತ್ತಿಗೆ ತಾರಿಣಿ ಹಾಗೂ ಆಕೆಯ ಪುತ್ರ ಧರಣೀಧರನನ್ನು ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!
Scroll to Top