(ನ್ಯೂಸ್ ಕಡಬ) newskadaba.com ಕಡಬ, ಮೇ.07. ಉಪ್ಪಿನಂಗಡಿ ಮೆಸ್ಕಾಂ ಕಛೇರಿಯ ಗುತ್ತಿಗೆ ಅಧಾರದಲ್ಲಿ ಮೀಟರ್ ರೀಡರ್ ಓರ್ವರಿಗೆ ವೃತ್ತಿ ನಿರ್ವಹಿಸುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದ್ದು ಬುಧವಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲಂಕಾರು ಕಕ್ವೆ ನಿವಾಸಿ ಶಿವಣ್ಣ ಗೌಡ ಹಲ್ಲೆಗೊಳಗಾದವರು. ಕೊಯಿಲ ಗ್ರಾಮದ ಆತೂರು ನಿವಾಸಿ ಯೂಸುಫ್ ಎಂಬವರ ಮನೆಯ ಮೀಟರ್ ರೀಡಿಂಗ್ ನಡೆಸಿ ರಸೀದಿಯನ್ನು ಮನೆಯಲ್ಲಿದ್ದ ಹಮೀದ್ ಎಂಬವರಿಗೆ ನೀಡಿದ್ದು, ಈ ಸಂದರ್ಭ ಬಿಲ್ಲು ಹೆಚ್ಚು ನೀಡಿದ್ದೀರಿ ಎಂದು ಅರೋಪಿಸಿ ಹಮೀದ್ ಮತ್ತು ಆತನ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಕಡಬ ಠಾಣೆಗೆ ಶಿವಣ್ಣ ಗೌಡ ದೂರು ನೀಡಿದ್ದಾರೆ. ಈ ಹಿಂದೆಯೂ ಮೂರು ಬಾರಿ ಬಿಲ್ಲಿನ ವಿಚಾರದಲ್ಲಿ ಹಮೀದ್ ಎಂಬಾತ ಶಿವಣ್ಣ ಗೌಡರ ವಿರುದ್ದ ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









