ಲಾಕ್‌ಡೌನ್ ನಡುವೆ ಕೆಲಸಕ್ಕೆ ಆಗಮಿಸಿದ ರಬ್ಬರ್ ಕಾರ್ಮಿಕರಿಂದ ದಿಢೀರ್‌ ಧರಣಿ ➤ ಅಧಿಕಾರಿಗಳು ಸ್ಥಳಕ್ಕೆ ಬಾರದೆ ರಬ್ಬರ್ ಹಾಲು ಹಾಕದ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಎ.15. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಕಾರ್ಮಿಕರನ್ನು ಯಾವುದೇ ಭದ್ರತೆ ಇಲ್ಲದೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯ ವಲಯದ ಕೊಂಬಾರು 14 ಸಿ.ಆರ್.ಸಿ.ಯ ಬೋಳ್ನಡ್ಕ ಕೊಂಬಾರು ಘಟಕದಲ್ಲಿ ಸುಮಾರು 30ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿದ ಘಟನೆ ಬುಧವಾರದಂದು ನಡೆಯಿತು.

ಕೊಂಬಾರು ಸಿ.ಆರ್.ಸಿ.ಯ ರಬ್ಬರ್ ಕಾರ್ಮಿಕರಾದ ಭಾಗ್ಯನಾಥ, ಸೆಲ್ವಕುಮಾರ್, ತಂಗರಾಜ್, ವಿಜಯ ಕುಮಾರ್ ಮೊದಲಾದವರು ಮಾತನಾಡಿ, ನಮ್ಮನ್ನು ಕೆಲಸಕ್ಕೆ ಬರುವಂತೆ ನಿಗಮದ ಅಧಿಕಾರಿಗಳು ಆದೇಶ ನೀಡಿದ್ದಾರೆ, ಆದರೆ ನಮ್ಮ ಭದ್ರತೆಯ ಬಗ್ಗೆ ಅವರಿಗೆ ಚಿಂತೆಯಿಲ್ಲ, ನಾವು ಕೆಲಸ ಮಾಡಬೇಕಾದರೆ ನಮಗೆ ಯಾವುದೇ ಸುರಕ್ಷೆಯನ್ನು ನೀಡಿಲ್ಲ, ನಮಗೆ ಮಾಸ್ಕ್ ನೀಡಿಲ್ಲ, ಕೆಲಸಕ್ಕೆ ಬಂದರೆ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ, ನಾವು ಪ್ರಧಾನಿಯವರ ಆದೇಶ ಪಾಲನೆ ಮಾಡಬೇಕಾ, ಅಥವಾ ನಿಗಮದ ಅಧಿಕಾರಿಗಳ ಆದೇಶ ಪಾಲನೆ ಮಾಡಬೇಕಾ, ಅಥವಾ ನಮ್ಮ ಸುರಕ್ಷತೆಯನ್ನು ನಾವು ಕಾಯ್ದುಕೊಳ್ಳಬೇಕಾ ಎಂದು ಪ್ರಶ್ನಿಸಿದ ಅವರು, ಇಲಾಖೆಯ ನೋಟಿಸ್ ನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಂತ ಉಲ್ಲೇಖಿಸಲಾಗಿದ್ದರೂ ನಮ್ಮಂತಹ ದಿನಗೂಲಿ ನೌಕರರನ್ನು ಇಂತಹ ಸಂದರ್ಭದಲ್ಲಿ ದುಡಿಸುತ್ತಿರುವುದು ಸರಿಯಲ್ಲ, ಒಂದು ವೇಳೆ ಕೆಲಸ ಮಾಡಬೇಕಿದ್ದರೂ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿ ಮತ್ತೆ ಕೆಲಸ ಮಾಡಿಸಲಿ ಎಂದು ಹೇಳಿದರು.

ಸ್ಥಳಕ್ಕೆ ನಿಗಮದ ಅಧಿಕಾರಿಗಳು ಬಾರದೆ ಇದ್ದರೆ ನಾವು ರಬ್ಬರ್ ಹಾಲು ಹಾಕುವುದಿಲ್ಲ ಎಂದು ಕಾರ್ಮಿಕರು ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಪ್ರಭಾರ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಮಸ್ತಾನ್ ಅವರು ಆಗಮಿಸಿ, ಈಗಾಗಲೇ ನಾವು ಇಲಾಖೆಯ ಆದೇಶವನ್ನು ಪಾಲನೆ ಮಾಡುತ್ತಿದ್ದೆವೆ, ನಾನೇ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ನಿಮಗೆ ಲಾಕ್ ಡೌನ್ ಅನ್ವಯ ಆಗುವುದಿಲ್ಲ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯನ್ನು ಅತ್ಯಗತ್ಯ ಸೇವೆ ಒದಗಿಸುತ್ತಿರುವ ಇಲಾಖೆ ಎಂದು ಪರಿಗಣಿಸಿ ಕರ್ತವ್ಯ ನಿರ್ವಹಿಸಬೇಕೆಂದು ರಾಜ್ಯ ಕಾರ್ಯದರ್ಶಿಯವರ ಪತ್ರ ಬಂದಿದೆ, ಈ ಆದೇಶದ ಮೇರೆಗೆ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ, ಅಲ್ಲದೆ ಕಾರ್ಮಿಕರಿಗೆ ಮಾಸ್ಕ್, ಹಾಗೂ ಸ್ಯಾನಿಟೈಸರ್ ಗಳನ್ನು ವಿತರಣೆ ಮಾಡುತ್ತೇವೆ, ಅಲ್ಲದೆ ನಿಮಗೆ ಗುರುತಿನ ಚೀಟಿ ಕೊಡುತ್ತೇವೆ ಎಂದಾಗ ಕಾರ್ಮಿಕರು ಮತ್ತು ಅಧಿಕಾರಿಯ ನಡುವೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಬಳಿಕ ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್.ಕೆ, ಕಡಬ ಎಸ್.ಐ. ರುಕ್ಮ ನಾಕ್, ಕೊಂಬಾರು ಗ್ರಾ.ಪಂ. ಸದಸ್ಯ ಮಧುಸೂಧನ್ ಮೊದಲಾದವರು ಆಗಮಿಸಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಐತ್ತೂರು ಗ್ರಾ,ಪಂ.ಅಧ್ಯಕ್ಷ ಸತೀಶ್ ಅವರು, ದೇಶದಲ್ಲಿ ಲಾಕ್ಡೌನ್ ಇರುವಾಗ ನಿಗಮದ ಈ ವ್ಯವಸ್ಥೆ ಸರಿಯಲ್ಲಿ ಈಗಾಗಲೇ ತಮಿಳು ಕಾಲೋನಿಯಲ್ಲಿ ಹೋಂ ಕ್ವಾರಂಟೈನ್ನಲ್ಲಿ ನಾಲ್ಕು ಮಂದಿ ಇದ್ದಾರೆ, ಈ ಬಗ್ಗೆ ನಾನು ಈಗಾಗಲೇ ಸಂಬಂಧಪಟ್ಟವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಕೋರಿದ್ದೆನೆ, ಈ ಪರಿಸ್ಥಿತಿಯಲ್ಲಿ ಜನರು ಕೆಲಸಕ್ಕೆ ಹೊರಗಡೆ ಓಡಾಟ ನಡೆಸಿದರೆ ಉಳಿದ ಜನರಿಗೂ ಸಮಸ್ಯೆಯಾಗುತ್ತದೆ, ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕಾರ್ಮಿಕರಿಗೆ ರಜೆ ನೀಡಬೇಕು ಎಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿದ ಕಡಬ ಎಸ್.ಐ.ರುಕ್ಮ ನಾಯ್ಕ್ ಈ ಬಗ್ಗೆ ಇಲ್ಲಿ ಚರ್ಚೆ ಬೇಡ ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತನಾಡುವ, ಮಾಸ್ಕ್ ಇಲ್ಲದಿದ್ದರೆ ನಾನೇ ನಿಮಗೆ ಮಾಸ್ಕ್ ಕೊಡುತ್ತೇನೆ ಎಂದರು. ಗ್ರಾ.ಪಂ.ಸದಸ್ಯ ಮಧುಸೂಧನ್ ಕೊಂಬಾರು ಮಾತನಾಡಿ, ಕಾರ್ಮಿಕರು ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತಿದ್ದಾರೆ, ಆದುದರಿಂದ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಪಂಚಾಯತ್ ಕರ್ತವ್ಯ, ನಿಗಮದ ಆದೇಶಗಳು ಬಂದಾಗ ಅದರ ಒಂದು ಪ್ರತಿಯನ್ನು ಪಂಚಾಯತ್ ಗೂ ಕಳುಹಿಸಿಕೊಡುವಂತೆ ಆಗ್ರಹಿಸಿದರು.

error: Content is protected !!

Join the Group

Join WhatsApp Group